02 February 2011

ದೃಶ್ಯ ಮಾಧ್ಯಮದ ಮೊದಲ ಸುದ್ದಿ -ಮೊದಲ ಫೋನ್ ಇನ್

ವಿವಿದ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದುದರ ಜೊತೆಗೆ ಕೃಷಿ ಚಟುವಟಿಕೆಯೂ ಮುಂದುವರಿದಿತ್ತು. ಇದೇ ವೇಳೆ ದೃಶ್ಯ ಮಾಧ್ಯಮವು ಬೆಳೆಯುವ ಕಾಲ ಅದಾಗಿತ್ತು. ಗೆಳೆಯ ವಿನಾಯಕನೊಂದಿಗೆ ಈಟಿವಿಗಾಗಿ ಹಲವಾರು ಕಡೆ ಸುತ್ತಾಡಿದ ಅನುಭವವೂ ಇತ್ತು.ಆಗಲೇ ಈ ಇಲೆಕ್ಟ್ರಾನಿಕ್ ಮೀಡಿಯಾದ ಹುಚ್ಚು ಬೆಳೆದಿತ್ತು.ಆಗ ಈಟಿವಿ ಮತ್ತು ಉದಯ ಟಿವಿ ಹೆಚ್ಚು ಜನಪ್ರಿಯವಾಗಿತ್ತು.

ಆ ನಂತರ ಆಗ ತಾನೆ ನ್ಯೂಸ್ ಚಾನೆಲ್ ಆಗಿ ಟಿವಿ9 ಬಂದಿತ್ತು. ಆದಾಗಿ ಕೆಲವೇ ಸಮಯದಲ್ಲಿ ಸುವರ್ಣ ವಾಹಿನಿ ಬಂದಿತು.ಜೊತೆ ಜೊತೆಗೇ ಸುವರ್ಣ ನ್ಯೂಸ್ ಚಾನೆಲ್ ಕೂಡಾ ಬಂದಿತು.ಅದರ ಚಾನೆಲ್ ಮುಖ್ಯಸ್ಥರಾಗಿ ಶಶಿಧರ್ ಭಟ್ ಅವರಿದ್ದರು. ಇವರನ್ನು ನಾನು ಮೊದಲೇ ಬಲ್ಲವನಾಗಿದ್ದೆ. ಮೊದಲು ಈಟಿವಿಗೆ ಭಾನಾಮತಿ ಕಾರ್ಯಕ್ರಮವನ್ನು ಭಟ್ ಸರ್ ಮತ್ತು ಅವರ ಪತ್ನಿ ಉಷಾ ಮೇಡಂ ಅವರು ನಡೆಸಿಕೊಡುತ್ತಿದ್ದಾಗ ಅವರಿಗಾಗಿ ಕೆಲವೊಂದು ಕಾರ್ಯಕ್ರಮಗಳನ್ನು ನೀಡಿದ್ದೆ. ಮತ್ತು ನನ್ನ ಚಟುವಟಿಕೆಗಳನ್ನು ಅವರು ಹತ್ತಿರದಿಂದ ಬಲ್ಲವರಾಗಿದ್ದರು.ಹೀಗಾಗಿ ನನ್ನ ಕನಸಿಗೆ ಜೀವ ಬಂದಿತ್ತು. ಅದು ನನಸಾಗುವ ದಿನವೂ ಹತ್ತಿರ ಬಂದಿತ್ತು.

೨೦೦೮ ಜೂನ್ ೨೬ರ ಹೊತ್ತಿಗೆ ಮಂಗಳೂರು ಬ್ಯೂರೋದ ಪುತ್ತೂರು ವರದಿಗಾರನಾಗಿ ಅಂದರೆ ಮೊದಲು ಬಿಡಿಸುದ್ದಿ ವರದಿಗಾರನಾಗಿಯೇ ಕೆಲಸಕ್ಕೆ ಸೇರಿಕೊಂಡೆ. ಒಂದು ವರ್ಷದ ನಂತರ ಜಿಲ್ಲಾ ವರದಿಗಾರನಾಗಿ ಭಡ್ತಿಯಾದ್ದು. ನನ್ನ ಆಸೆ ಇದ್ದುದು ಅದೇ. ಒಬ್ಬ ಗ್ರಾಮೀಣ ವರದಿಗಾರನಾಗಿ ಹಳ್ಳಿ ಸುದ್ದಿಗಳನ್ನು , ಇಲ್ಲಿನ ವಿಶೇಷತೆಗಳನ್ನು ಹೊರ ಜಗತ್ತಿಗೆ ನೀಡಬೇಕು ಎಂಬ ಆಸೆ ಇತ್ತು.ಸಂಬಳದ ಬಗ್ಗೆ ಆಗ ಯೋಚನೆ ಇದ್ದಿರಲಿಲ್ಲ. ಒಬ್ಬ ಗ್ರಾಮೀಣ ಟಿವಿ ವರದಿಗಾರನಾಗಬೇಕು, ಹಳ್ಳಿಗೇನಾದರೂ ಪ್ರಯೋಜನವಾಗಬೇಕು ಎಂಬ ಒಂದೇ ಉದ್ದೇಶ ಇತ್ತು.ಅದಕ್ಕೆ ಶಶಿಧರ್ ಭಟ್ ಅವರು ಅವಕಾಶವನ್ನೂ ನೀಡಿದರು. ಹೀಗೆ ಅವರು ಕೊಟ್ಟ ಅವಕಾಶವನ್ನು ಸರಿಯಗಿ ಬಳಸಿಕೊಳ್ಳುವ ನಿರ್ಧಾರದೊಂದಿಗೆ ಊರಿಗೆ ಬಂದು ಕ್ಯಾಮಾರ ಖರೀದಿಸಿ ಕೆಲಸ ಸುರು. ಆರಂಭದಲ್ಲಿ ಕ್ಯಾಮಾರ ನಾವೇ ಖರೀದಿಸಬೇಕಿತ್ತು.ಕೆಲ ದಿನಗಳವರೆಗೆ ಮಿತ್ರ ಸುಬ್ರಹ್ಮಣ್ಯದ ಲೋಕೇಶ ಬಳ್ಳಡ್ಕರವರ ಕ್ಯಾಮಾರದಲ್ಲಿ ಕೆಲಸ ಶುರು.ಅವರೂ ಜೊತೆಗೆ ಬಂದು ವೀಡಿಯೋದ ಮಾಹಿತಿಗಳನ್ನು ಹೇಳಿಕೊಟ್ಟರು. ಅದರಂತೆ ಸುಳ್ಯದ ಹಳ್ಳಿ ಪ್ರದೇಶವಾದ ನಡುಗಲ್ಲಿನ ಪ್ರದೇಶದಲ್ಲಿ ಕಾಡಾನೆಗಳು ಕೃಷಿ ಭೂಮಿಗೆ ನುಗ್ಗಿ ಕೃಷಿ ನಾಶಪಡಿಸಿದ್ದರ ಬಗ್ಗೆ ಒಂದು ಸ್ಟೋರಿ ಮಾಡಿ ಅದಕ್ಕೊಂದು ಪಿ2ಸಿ ಕೊಟ್ಟು ಕ್ಯಾಸೆಟ್ ಮಂಗಳೂರಿಗೆ ಕಳುಹಿಸಿ ಸ್ಕ್ರಿಪ್ಟ್ ಫ್ಯಾಕ್ಸ್ ಮಾಡಿಯಾಗಿತ್ತು. ಆಗ ವಿಶುವಲ್ ಕಳುಹಿಸಲು ವ್ಯವಸ್ಥೆಗಳಿಲ್ಲ. ವೀಡಿಯೋ ತೆಗೆದು ಮಂಗಳೂರಿಗೆ ಬಸ್ಸಿನಲ್ಲಿ ಕಳುಹಿಸಬೇಕು.ಅಲ್ಲಿಗೆ ಆಫೀಸಿನ ಹುಡುಗರು ಬಂದು ಕ್ಯಾಸೆಟ್ ಪಡೆದು ವಿಶುವಲ್ ಬೆಂಗಳೂರಿಗೆ ಕಳುಹಿಸಬೇಕಾಗಿತ್ತು.

ಅದಾದ ನಂತರ ಇನ್ನೊಂದು ದಿನ ಹಳ್ಳಿ ಪ್ರದೇಶವಾದ ಪಂಬೆತ್ತಾಡಿಯಲ್ಲಿ ಇಲಿ ಜ್ವರದ ಕುರಿತು ಸ್ಟೋರಿ ಮಾಡಿ ಕ್ಯಾಸೆಟ್ ಕಳುಹಿಸಿ ಸ್ಕ್ರಿಪ್ಟ್ ಮಾಡಿ ಕಳುಹಿಸಿ ಹೊಸ ಕ್ಯಾಮಾರ ಕಳುಹಿಸಲು ಬೆಂಗಳೂರಿಗೆ.ಅಲ್ಲಿ
ನನ್ನ ಮಿತ್ರ ಆದರ್ಶನೊಂದಿಗೆ ಬಜಾರ್‌ಗಳಿಗೆ ತೆರಳಿ ಪ್ಯಾನಸಾನಿಕ್ ಕ್ಯಾಮಾರವನ್ನು ೨೬ ಸಾವಿರ ನೀಡಿ ಖರೀದಿ ಮಾಡಿದ ನಂತರ ಸ್ಟೋರಿ ಸುರು. ಕ್ಯಾಮಾರ ಖರೀದಿಗೆ ಹೋದ ದಿನದಂದೇ ಇಲಿ ಜ್ವರದ ಸ್ಟೋರಿ ಏರ್ ಆಗುತ್ತಾ ಇತ್ತು.ಅದಕ್ಕೆ ನನ್ನ ಮೊದಲ ಫೋನ್ ಇನ್ ಕೂಡಾ ಇದ್ದಿತ್ತು. ಆ ಬಳಿಕ ಸ್ಟೋರಿಗಳ ಬೇಟೆ ಆರಂಭವಾಯಿತು.ಕ್ಯಾಮಾರಾ ಖರೀದಿಗೆ ಮುನ್ನ ಲೋಕೇಶ್ ನನ್ನೊಂದಿಗೆ ಹಲವಾರು ಬಾರಿ ಸಹಾಯಕ್ಕೆ ಬಂದಿದ್ದರು.ವೀಡಿಯೋ ತೆಗೆಯುದಕ್ಕಾಗಿ. ಒಮ್ಮೆ ಲೋಗೋದ ಮೂಲಕ ವಾಯ್ಸ್ ರೆಕಾರ್ಡ್ ಮಾಡಲು ಪಟ್ಟ ಪಾಡು ಹೇಳತೀರದು. ಯಾಕಂದ್ರೆ ಲೋಕೇಶನಲ್ಲಿರೋ ಇನ್‌ಪುಟ್ ಜಾಕ್ ಕ್ಯಾಮಾರಕ್ಕೆ ಆಗೋದಿಲ್ಲ. ಅದಕ್ಕಾಗಿ ಇನ್ನೊಂದು ಮೈಕ್ ಅಂಗಡಿಯಿಂದ ಕೇಬಲ್ ತಂದು ಆ ನಂತರ ಹೋದದ್ದೂ ಇದೆ. ಹೀಗೆ ವಿದ್ಯುನ್ಮಾನ ವರದಿಗಾರಿಕೆ ಆರಂಭದಲ್ಲೇ ಸವಾಲಾಯಿತು. ಆದರೆ ಆ ನಂತರ ಇದೆಲ್ಲಾ ಸಲೀಸಾಯಿತು. ಆ ಬಳಿಕ ಇಡೀ ಕ್ಷೇತ್ರದೊಳಕ್ಕೆ ನುಗ್ಗಲು ಕಾರಣವಾಯಿತು.ಇದಕ್ಕೆ ಅವಕಾಶ ಮಾಡಿಕೊಟ್ಟ ಶಶಿಧರ್ ಭಟ್ , ಉಷಾ ಮೇಡಂ ಅವರನ್ನು ಸದಾ ನೆನಪಿಸುವುದರ ಜೊತೆಗೆ ಆರಂಭದಲ್ಲಿ ಈ ಫೀಲ್ಡ್‌ನಲ್ಲಿ ಸಹಕರಿಸಿದ ಲೋಕೇಶ್ ಬಳ್ಳಡ್ಕ , ಪುತ್ತೂರಿನ ಮಿತ್ರರುಗಳಾದ ಪ್ರವೀಣ್ ಕುಮಾರ್ ಮತ್ತು ಅಜಿತ್‌ರನ್ನು ನೆನಪಿಸಿಕೊಳ್ಳುತ್ತೇನೆ.

27 December 2010

ಕಲ್ಲು ಶೊಧಕ್ಕೆ ಇಳಿದಾಗ . . .

ಅದು ಕೊಲ್ಲಮೊಗ್ರದ ಕೂಜಿಮಲೆ ಪ್ರದೇಶ.ಕೆಂಪು ಕಲ್ಲು ಹೇರಳವಾಗಿ ಸಿಗೋ ಸ್ಥಳ.ಇದನ್ನು ಅಕ್ರಮವಾಗಿ ಅದೆಷ್ಟೋ ಮಂದಿ ತೆಗೆಯುತ್ತಾರೆ.ಈ ಕುರಿತಾಗಿ "ಹೊಸದಿಗಂತ"ಕ್ಕೊಂದು ವಿಶೇಷ ವರದಿಗೆ ಸಿದ್ದತೆ ನಡೆಸಿ ಗುತ್ತಿಗಾರಿನ ಫೋಟೋ ಗ್ರಾಫರ್ ಗೋಪಾಲ್ ಚತ್ರಪ್ಪಾಡಿಯವರೊಂದಿಗೆ ಅತ್ತ ಕಡೆ ಹೆಜ್ಜೆ.

ಗುತ್ತಿಗಾರಿನಿಂದ ಹೊರಟು ಕೊಲ್ಲಮೊಗ್ರಕ್ಕೆ ಹೋಗಿ ಅಲ್ಲಿ ಸ್ಕೂಟರ್ ಇರಿಸಿ ಕಾಲ್ನಡಿಗೆ ಶುರು.ನಮಗೆ ದಾರಿಗಾಗಿ ಅಲ್ಲಿನ ಒಬ್ಬ ಹುಡುಗ.ಅಬ್ಬಾ . .! ಸರಿ ಸುಮಾರು ಒಂದು ಗಂಟೆಗಳ ಕಾಲದ ಏರುಹಾದಿಯಲ್ಲಿ ಸಾಗಿದಾಗ ಸಿಕ್ಕಿತು ಕೂಜಿಮಲೆ.ಮಹೇಶಣ್ಣ ಮಾತಾಡ್ಬೇಡಿ ಅಲ್ಲಿ ಫಾರೆಸ್ಟ್‌ನವರಿದ್ದಾರೆ ಎಂದರು ಗೋಪಾಲ್.ನಿಶ್ಯಬ್ದವಾಗಿ ಹೋಗಿ ಫೋಟೋ ತೆಕ್ಕೊಂಡು ಬಂದಾಗ ಫಾರೆಸ್ಟ್‌ವನರು ಯಾರಲ್ಲಿ ಇಲ್ಲಿಗೆ ಬನ್ನಿ ಅಂತಂದ್ರು. ಸರಿ ಬರ್ತೇವೆ ಅಂತ ಕೆಳಗೆ ಹೋದೆವು. ಅಬ್ಬಾ . !, ಒಬ್ಬನಿಗೆ ಆ ಮಧ್ಯಾಹ್ನವೇ ಫುಲ್ "ಲೋಡ್" ಆಗಿತ್ತು. ಇನ್ನೊಬ್ಬ ನಮ್ಮನ್ನು ವಿಚಾರಿಸಿದ. ಎಲ್ಲಾ ಡೀಟೈಲ್ಸ್ ಕೊಟ್ಟಾಯ್ತು. ನನ್ನ ಐಡಿ ಚೆಕ್ ಮಾಡಿದ. ನಾವು ಮಾಧ್ಯಮದವರು ಅಂತ ಗೊತ್ತಾಯ್ತು. ಸರಿ ಇಲ್ಲೇನು ಆಗ್ತಾ ಇಲ್ಲ. ಸುಮ್ಮನೆ ನ್ಯೂಸ್ ಮಾಡ್ಬೇಡಿ ಅಂದ ಆ ಫಾರೆಸ್ಟ್ .ಓಕೆ ಅಂದ ನಾನು ಅಲ್ಲಿಂದ ಹೊರಟೆವು.

ನಮ್ಮೊಂದಿಗೆ ಬಂದಿದ್ದ ಆ ಹುಡುಗ ಹೇಳಿದ ಇಲ್ಲಿ ಯಾವಾಗಲೂ ಕಲ್ಲು ವ್ಯಾಪಾರ ಆಗ್ತಾನೇ ಇರ್ತದೆ ಇವರದ್ದೇ ಎಲ್ಲಾ ವ್ಯವಸ್ಥೆ ಅಂತ ಹೇಳಿದ. ಮೇಲಾಧಿಕಾರಿಗಳು ಬರೋವಾಗ ಇಲ್ಲಿಗೆ ಮೆಸೇಜ್ ಬರುತ್ತೆ.ಕೆಳಗೊಂದು ಬಾಂಬ್ ಸಿಡಿಯುತ್ತೆ.ಅದು ಅಧಿಕಾರಿಗಳು ಬರೋ ಸಿಗ್ನಲ್ ಅಂದ ಆತ.ಈ ಸಿಗ್ನಲ್ ಆಧಾರದಲ್ಲಿ ಇವರು ಕೆಲಸ ಮಾಡ್ತಾರೆ ಎಂದು ವಿವರಿಸಿದ ಆ ಹುಡುಗ.

ಓಹೋ ಹಾಗಾ ವಿಷಯ.

ಹಾಗಾಗಿ ನಾವು ಸಡನ್ ಆಗಿ ಬಂದ್ದು ಇವನಿಗೆ ನುಂಗಲಾರದ ತುತ್ತಾಗಿತ್ತು ಎಂಬುದು ನಮ್ಮ ಅರಿವಿಗೆ ಬಂದಿತ್ತು.ಆ ನಂತರ ನಾವು ಕಲ್ಮಕಾರು ಕಡೆಗೆ ಹೆಜ್ಜೆ ಹಾಕಿದೆವು.

ಅಲ್ಲಿ ಕಲ್ಲು ವ್ಯಾಪಾರಕ್ಕೆ ಅಧಿಕಾರಿಗಳದ್ದೇ ಸಹಕಾರ. ಎಲ್ಲಾದರೂ ಹಿರಿಯ ಅಧಿಕಾರಿಗಳು ಆ ಪ್ರದೇಶಕ್ಕೆ ಬರ್ತಾರೆ ಎಂದಾದರೆ ಇಲ್ಲಿನ ಅಧಿಕಾರಿಗಳಿಗೇ ಮೊದಲೇ ಮೆಸೇಜ್ ಬರ್ತದೆ.ಹಾಗಾಗಿ ಅಂದು ಯಾರೂ ಕೂಡಾ ಹರಳು ಕಲ್ಲಿಗೆ ಬರೋದೇ ಇಲ್ಲ. ಒಂದು ವೇಳೆ ಅಧಿಕಾರಿಗಳು ಮಾಹಿತಿ ನೀಡದೆ ಬಂದರು ಎಂದಾದರೆ ಕಲ್ಮಕಾರಿನಲ್ಲಿ ಒಂದು ಪಟಾಕಿ ಬಾಂಬ್ ಸಿಡಿಯುತ್ತೆ. ಅಧಿಕಾರಿಗಳು ಕಾಡು ದಾರಿಯಲ್ಲಿ ನಡೆದೇ ಬರಬೇಕು. ಕಲ್ಮಕಾರಿನಲ್ಲಿ ಒಂದು ಪಟಾಕಿ ಬಾಂಬ್ ಸಿಡಿದ ಕೆಲವೇ ಕ್ಷಣದಲ್ಲಿ ಇನ್ನೊಂದು ಸಿಡಿಯುತ್ತೆ.ಇಷ್ಟು ಹೊತ್ತಿಗೆ ಈ ಸದ್ದು ಕೂಜಿಮಲೆಗೆ ಕೇಳುತ್ತೆ. ಹರಳು ಕಲ್ಲು ತೆಗೆಯೋರೆಲ್ಲಾ ನಾಪತ್ತೆ. ಅಧಿಕಾರಿಗಳದ್ದು ಸರ್ಪಗಾವಲು . .!. ಇದು ಮೊಬೈಲ್ ಇಲ್ಲದ ಕಾಲದ ವ್ಯವಸ್ಥೆ.ಈಗಂತೂ ಮೊಬೈಲ್ ಸಿಗುತ್ತೆ.ಫೋನೇ ಬರುತ್ತೆ ಬಿಡಿ.

26 December 2010

ಉಷಾಕಿರಣ ನಿಂತಿತು . .

ಸಚಿನ್ ಕುಕ್ಕೆ ಬಂದು ಹೋದ ಬಳಿಕ ಅನೇಕ ವಿವಿ‌ಐಪಿಗಳ ದಂಡೇ ಬರಲು ಆರಂಭಿಸಿತ್ತು.ರಾಬಿನ್ ಉತ್ತಪ್ಪ ಸೇರಿದಂತೆ ಇನ್ನಿತರರು ಅದೇ ತಿಂಗಳಲ್ಲಿ ಭೇಟಿ ಇತ್ತರು.

ಹಾಗೇ ಉಷಾಕಿರಣ ಪತ್ರಿಕೆಗೆ ನಾನು ವರದಿ ಮಾಡುವುದಕ್ಕೆ ಆರಂಭಿಸಿ ಸರಿಸುಮಾರು ಒಂದು ವರ್ಷ ಪೂರೈಸಿತ್ತು.ಅದಾಗಲೇ ಅನೇಕ ಸ್ಟೋರಿಗಳನ್ನು ಮಾಡಿ ಮಂಗಳೂರು ಪತ್ರಿಕಾ ಸಮೂಹದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣವಾಯಿತು.

ಕೊನೆಗೆ 2006 ಸಪ್ಟಂಬರ್ ಹೊತ್ತಿಗೆ ಉಷಾಕಿರಣದ ಲೋಕಲ್ ಪೇಜ್ ಕಡಿಮೆ ಆಯಿತು.ಹಾಗಾಗಿ ಸ್ಥಳೀಯ ವರದಿಗಾರರುಗಳ ಅಗತ್ಯ ಅಷ್ಟಾಗಿ ಇರಲಿಲ್ಲ.ಕೊನೆಗೆ ಬಹುತೇಕ ಎಲ್ಲಾ ಬಿಡಿಸುದ್ದಿ ವರದಿಗಾರರು ಉಷಾಕಿರಣದಿಂದ ಹೊರಬಂದರು.ಅದಾಗಿ ಕೆಲವೇ ಅಮಯದಲ್ಲಿ ಉಷಾಕಿರಣದ ಮುದ್ರಣವು ನಿಂತಿತು. ಸರಿಸುಮಾರು ಒಂದೂವರೆ ವರ್ಷಗಳ ಕಾಲ ಉಷಾಕಿರಣಕ್ಕಾಗಿ ವರದಿ ಮಾಡಿ ಸಾಕಷ್ಟು ಅನುಭವಗಳಾಗಿತ್ತು.

ಆಗ ಮತ್ತೆ ಕಾಣಿಸಿದ್ದು ಹೊಸದಿಗಂತ.

ಆ ಹೊತ್ತಿಗೆ ಸುಬ್ರಹ್ಮಣ್ಯದಲ್ಲಿ ಬಿಡಿಸುದ್ದಿ ವರದಿಗಾರನ ಅವಶ್ಯಕತೆ ಹೊಸದಿಗಂತಕ್ಕಿತ್ತು.ತಕ್ಷಣವೇ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡು ವರದಿ ಮಾಡುವುದಕ್ಕೆ ಕಚೇರಿಯಿಂದ ಸೂಚನೆ ನೀಡಿದರು. ಆರಂಭದಲ್ಲಿ ಒಮ್ಮೆ ಸ್ವಲ್ಪ ತೊಂದರೆ ಬಂದರೂ ನಂತರ ಯಾವುದೇ ಅಡ್ಡಿಗಳು ಇರಲಿಲ್ಲ.ಮತ್ತೆ ಉಷಾಕಿರಣದಂತೆಯೇ ವರದಿಗಳು ಹೊಸದಿಗಂತದಲ್ಲಿ ಬರತೊಡಗಿತು.2008 ರ ವರೆಗೆ ಇದೇ ರೀತಿ ಮುಂದುವರಿದಾಗ ಎಪ್ರಿಲ್ ತಿಂಗಳ ಸಮಯದಲ್ಲಿ ಆಗ ತಾನೆ ರಾಜ್ಯದಲ್ಲಿ ಆರಂಭಗೊಂಡಿದ್ದ ಸುವರ್ಣ ನ್ಯೂಸ್ ಚಾನೆಲ್‌ನತ್ತ ದೃಷ್ಠಿ ಬಿತ್ತು.ಹೀಗಾಗಿ 2008 ಜೂನ್ ವೇಳೆಗೆ ಸುವರ್ಣ ನ್ಯೂಸ್ ಸೇರ್ಪಡೆಯ ಅವಕಾಶ ಸಿಕ್ಕಿತು.

28 November 2010

ಸಚಿನ್ ಬಂದ್ರು . . !




ಆವತ್ತು 2006 ಮೇ 6.

ಕ್ರಿಕೆಟ್ ಕಲಿ ಸಚಿನ್ ತೆಂಡೂಲ್ಕರ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.

ಆಗ ರಾತ್ರಿ 9.30 ರ ಹೊತ್ತು.ನೇರವಾಗಿ ಲಾಡ್ಜ್‌ಗೇ ಬಂದ ಸಚಿನ್ ವಿಶ್ರಾಂತಿ ಪಡೆದಿದ್ದರು. ಈಟಿವಿಯಿಂದ ವಿನಾಯಕನೂ ಬಂದಿದ್ದ.ನಾವಿಬ್ಬರೂ ಅಂದು ರಾತ್ರಿ ಸುಬ್ರಹ್ಮಣ್ಯದಲ್ಲೇ ಇದ್ದೆವು. ಸಚಿನ್‌ದು ಸರ್ಪಸಂಸ್ಕಾರ. ಹಾಗಾಗಿ ಅವರು 3 ದಿನಗಳ ಕಾಲ ಕುಕ್ಕೆಯಲ್ಲೇ ಇರಬೇಕು.ಅಂದು ರಾತ್ರಿ ಯಾವುದೇ ಘಟನೆಗಳು ನಡೆಯಲಿಲ್ಲ.ಒಂದೆರಡು ಸಾಲಿನ ಸುದ್ದಿ ಅಷ್ಟೇ.ಯಾಕೆಂದರೆ ಅವರು ಧರ್ಮಸ್ಥಳಕ್ಕೆ ಬಂದು ಕುಕ್ಕೆಗೆ ಬಂದಿದ್ದರು.

ಬೆಳಗ್ಗೆ 6 ಗಂಟೆ.

ಸಚಿನ್ ರೂಂನಿಂದ ಹೊರಬಂದಿರಲಿಲ್ಲ.ವಿನಾಯಕ ನನಗೆ ಮೇಲಿನಿಂದ ಮೇಲೆ ಫೋನು ಮಾಡುತ್ತಲೇ ಇದ್ದ."ಏ ಅಣ್ಣಾ ಎಲ್ಲಿದ್ದ ಬಾ ಅಂತ . ." ಹೇಳುತ್ತಲೇ ಇದ್ದ. ಅಂತೂ 6.30 ಕ್ಕೆ ಸುಬ್ರಹ್ಮಣ್ಯಕ್ಕೆ ತಲಪಿದೆ. ಅಂತೂ ಸಚಿನ್ 7 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೊರಟರು. ನಾನು ಮತ್ತು ವಿನಾಯಕ ಇಬ್ಬರೂ ಸಚಿನ್‌ನ ಹಿಂದು ಮುಂದು ಹೋಗಿ ವಿಷುವಲ್ ಫೋಟೂ ತೆಗೆದುಕೊಂಡೆವು.ಜೊತೆಗೆ ಇನ್ನೂ ಅನೇಕ ಮಾಧ್ಯಮದ ಮಂದಿ ಇದ್ದರು. ಮಂಗಳೂರಿನಿಂದಲೂ ಅನೇಕರು ಬಂದಿದ್ದರು. ಸಚಿನ್‌ರದ್ದು ಪೂಜೆ ಮುಗೀತು.ಅವರು ಯಾವ ಮಾಧ್ಯಮದ ಮಂದಿಯಲ್ಲೂ ಮಾತನಾಡಿರಲಿಲ್ಲ.ನಮ್ಮ ಪತ್ರಿಕೆಯಿಂದಲೂ ಮಂಗಳೂರಿನಿಂದ ಬಂದಿದ್ದರು.ಆದರೆ ವರದಿಯ ಉಸ್ತುವಾರಿ ನನಗಿತ್ತು.ಅಂತೂ ಮಧ್ಯಾಹ್ನದ ಸಮಯಕ್ಕೆ ನಾನು ಬೇರೊಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ.ಸಂಜೆ ಬಂದು ನಾನು ಸಚಿನ್ ಸುದ್ದಿಯನ್ನೂ ಕಳುಹಿಸಿದೆ. ಯಾರಲ್ಲೂ ಮಾತಾಡಿಲ್ಲ ಅಂತಾನೂ ಆಫೀಸಿಗೆ ಹೇಳಿದೆ.

ಮರುದಿನ ನನ್ನ ಬೈಲೈನ್ ಹಾಕಿ ನ್ಯೂಸ್ ಬಂದಿದೆ.

ಆದರೆ ಅದು ಎಲ್ಲವೂ ನಾನು ಬರೆದ ಸುದ್ದಿಯಾಗಿರಲಿಲ್ಲ.ಸ್ವಲ್ಪ ಹೊತ್ತಿನ ನಂತರ ನಮ್ಮ ಮಂಗಳೂರು ಪ್ರತಿನಿಧಿಯಿಂದ ಫೋನು ಬಂತು.ನೀವ್ಯಾಕೆ ನ್ಯೂಸ್ ಕಳುಹಿಸಿದ್ದು,ನನ್ನ ನ್ಯೂಸ್‌ಗೆ ನಿಮಗೆ ಬೈಲೈನ್ ಹಾಕಿದಾರೆ ಎಂದು ಹೇಳಿದರು.ಅದಕ್ಕೆ ನನಗೇನು ಗೊತ್ತಿಲ್ಲ ,ನಾನು ಕೂಡಾ ನ್ಯೂಸ್ ಕಳುಹಿಸಿದ್ದೆ ಎಂದು, ನಂತರ ಆಫೀಸಿಗೆ ಕೇಳಿದೆ."ಹೋ . .. ಹಾಗಾಯಿತಾ. . ". ಎಂದು ಕೇಳಿದರು.ಮತ್ತೇನಾಯಿತು ಗೊತ್ತಿಲ್ಲ. .

ಅಂದಿನ ದಿನ ಹಾಗಾದರೆ ನಾನು ಮತ್ತು ವಿನಾಯಕ ಮೂರನೇ ದಿನ ಬೆಳಗಿನಿಂದಲೇ ಸಚಿನ್‌ರನ್ನು ಮಾತನಾಡಿಸಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆವು. ಆದರೆ ಸಂಜೆಯವರೆಗೂ ಸಿಕ್ಕೇ ಇಲ್ಲ.ಮಾತನಾಡಿಯೇ ಇಲ್ಲ.ಸಚಿನ್ ಕುಕ್ಕೆಯಿಂದ ಹೋಗೇ ಬಿಟ್ಟರು.ಆದರೆ ಮರುದಿನ ನೋಡಿದ್ರೆ ಒಂದೆರಡು ಪ್ರಮುಖ ಪತ್ರಿಕೆಯಲ್ಲಿ ಸಚಿನ್ ಹೇಳಿಕೆ ಇತ್ತು. ನಾನು ಮುಂದಿನ ಪ್ರವಾಸಕ್ಕೆ ಸಿದ್ದ ಎಂಬುದು ಅದರ ಸಾರಾಂಶ. ಈ ನ್ಯೂಸ್ ದೇಶದಾದ್ಯಂತ ಪಿಟಿ‌ಐ ಮೂಲಕ ಹೋಯಿತು.

ಸಚಿನ್ ಮುಂಬಯಿಗೆ ತಲುಪುತ್ತಿದ್ದಂತೆಯೇ ಕ್ರೀಡಾ ಚಾನೆಲ್‌ವನರು ಲೋಗೋ ಹಿಡಿದು ಕೇಳಿದ್ರು ,ನೀವು ಸುಬ್ರಹ್ಮಣ್ಯದಲ್ಲಿ ಮುಂದಿನ ಪ್ರವಾಸಕ್ಕೆ ರೆಡಿ ಅಂದ್ರಲ್ಲ ?. ಅಂತ ಪ್ರಶ್ನೆ ಮಾಡಿದ್ರು. ಆಗ ಸಚಿನ್ ಅಂದ್ರು , ನಾನು ಅಲ್ಲಿ ಯಾರಲ್ಲೂ , ಯಾವುದೇ ಮೀಡಿಯಾದಲ್ಲೂ ಮಾತಾಡಿಲ್ಲ , ಇದು ಮಾಧ್ಯಮದ್ದೇ ಸೃಷ್ಠಿ ಅಂತಂದ್ರು . .!.

ಮತ್ತೆ ಗೊತ್ತಾಯಿತು , ಸ್ವಾಮೀಜಿಗಳಲ್ಲಿ ಸಚಿನ್ ಹಾಗೇ ಹೇಳಿದ್ದಾರಂತೆ ಅದನ್ನು ಅವರು ಬೇರೆಯವರಲ್ಲಿ ಕೇಳಿ ಬರೆದದ್ದು ಅಂತ . . .!. ವಾಸ್ತವವಾಗಿ ಸಚಿನ್ ಹಾಗೆ ಹೇಳಿದ್ದರೋ ಅಲ್ಲ ಆ ಪತ್ರಕರ್ತರೇ ಸೃಷ್ಠಿ ಮಾಡಿದ್ದೋ ಗೊತ್ತಿಲ್ಲ. ಅಲ್ಲಾ ಇವರಿಗೇನು ಕೇಳಿತ್ತೋ ಗೊತ್ತಿಲ್ಲ. ಅಂತೂ ಸಚಿನ್‌ಗೆ ಇಲ್ಲಿನ ಮೀಡಿಯಾ ಹೇಗೆ ಅಂತ ಗೊತ್ತಾಗಿರಬಹುದು . .! ಅಂತೂ ಹೀಗೂ ಮಾಡಲಾಗುತ್ತೆ ಅಂತ ಹೊಸದೊಂದು ತಂತ್ರ ಗೊತ್ತಾಯಿತು.ಸುದ್ದಿಗಾಗಿ ಸುದ್ದಿ ಮಾಡೋದು , ಸುದ್ದಿಯ ಹಪಹಪಿ ಹೇಗಿರುತ್ತೆ ಅನ್ನೋದು ಕೂಡಾ ಗೊತ್ತಾಯ್ತು . .!.

ಸುದ್ದಿಗಾಗಿ ಕುಮಾರಪರ್ವತ ಹತ್ತಿದೆವು . !

ಆಗ ನನ್ನಲ್ಲಿ ಕ್ಯಾಮಾರಾ ಇದ್ದಿರಲಿಲ್ಲ.ಯಾವುದಾದ್ರೂ ಫೋಟೋ ಬೇಕಾದ್ರೆ ಸುಬ್ರಹ್ಮಣ್ಯದ ಶಾಂತಲಾ ಸ್ಟುಡಿಯೋದ ಲೋಕೇಶ ಅವರನ್ನು ಕರೆದುಕೊಂಡು ಹೋಗುತ್ತಿದ್ದೆ. ನಮ್ಮಂತೆ ಅವರಿಗೂ ಆಗ ಇದೊಂದು ರೀತಿಯ ಥ್ರಿಲ್. ಇದೇ ರೀತಿಯ ಥ್ರಿಲ್‌ನಿಂದಾಗಿಯೇ ನಾವೊಮ್ಮೆ ಕುಮಾರಪರ್ವತದ ಗಿರಿಗದ್ದೆಯವರೆಗೆ ಹೋಗಿದ್ದೆವು.ಆದರೆ ಆ ಸ್ಟೋರಿ ಮಾತ್ರಾ ಬಂದದ್ದು ಒಳ ಪುಟದಲ್ಲಿ , ಅದೂ ಚಿಕ್ಕದಾಗಿ. .!.

ಅಂದು ಯಾವ ವಾರ ಅಂತ ನೆನಪಿಲ್ಲ.ಸುಬ್ರಹ್ಮಣ್ಯಕ್ಕೆ ಹೋಗಿದ್ದೆ. ಅದ್ಯಾಕೋ ಕುಮಾರಪರ್ವತ ಚಾರಣ ಮಾಡುವವರಿಗೆ ಅಲ್ಲಿ ಅರಣ್ಯ ಇಲಾಖೆ ಭಾರೀ ಫೀಸು ತೆಗೀತಾರೆ ಎಂಬ ವಿಷಯ ನೆನಪಾಯಿತು. ಕೂಡಲೇ ಲೋಕೇಶ್‌ಗೆ ಫೋನು ಮಾಡಿದಾಗ ಇವತ್ತು ಫ್ರೀ ಇದ್ದೇನೆ ಅಂತ ಹೇಳಿದ್ರು. ಗಿರಿಗದ್ದೆಗೆ ಹೋವುವನ ಎಂದು ಕೇಳಿದ್ದೇ ತಡ. ರೆಡಿ ಅಂತ ಕ್ಯಾಮಾರ ಹೆಗಲಿಗೆ ಹಾಕಿಕೊಂಡು ಬಂದೇ ಬಿಟ್ಟರು. ಸರಿ ನಮ್ಗೆ ಸುಮಾರು 3 ಗಂಟೆ ಬೇಕಾಗಬಹುದು ಅಂತ ಯೋಚಿಸಿ ತಿಂಡಿ , ನೀರು ತೆಕ್ಕೊಂಡು ನಾನು ಮತ್ತು ಲೋಕೇಶ್ ಗಿರಿಗದ್ದೆ ಬೆಳಗ್ಗೆ 10.30 ರ ಸುಮಾರಿಗೆ ಹೊರಟೆವು. ಸುಮಾರು 2.30 ತಾಸು ನಡೆದಾಗ ಗಿರಿಗದ್ದೆ ಬಂತು. ಅಬ್ಬಾ ಅಂತ ಗಿರಿಗದ್ದೆ ಭಟ್ಟರ ಮನೆಗೆ ಹೋಗಿ ನೀರು ಕುಡಿದು, ಈಗ ಬರ್ತೇವೆ ಅಂತ ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ಗೆ ಹೋದೆವು.ಮೊದಲೇ ನಾವು ಮಾತನಾಡಿದಂತೆ ನಾನು ಅರಣ್ಯ ಸಿಬ್ಬಂದಿಗಳ ಜೊತೆ ಮಾತನಾಡೋದು , ಲೋಕೇಶ ಫೋಟೋ ತೆಗೆಯೋದು. ಹಾಗೇ ಎಲ್ಲವೂ ಆಯಿತು. ನಮ್ಮ ಕೆಲಸ ಆದ ನಂತರ ಗಿರಿಗದ್ದೆಯಲ್ಲಿ ಊಟ ಮಾಡಿ . ಅವರದ್ದೂ ಫೋಟೋ ತೆಕ್ಕೊಂಡು ಸುಬ್ರಹ್ಮಣ್ಯಕ್ಕೆ ತಲಪೋವಾಗ 5.30. ಆ ನಂತ್ರ ಮನೆಗೆ.

ಆ ಸುದ್ದಿ ಕಳುಹಿಸಿದೆ. ಆದರೆ ಅದು ಬಂದದ್ದು ಮಾತ್ರಾ ಲೋಕಲ್ ಎಡಿಶನ್‌ನ ಒಳಗಿನ ಪುಟದಲ್ಲಿ.ತುಂಬಾ ಬೇಸರವಾಗಿತ್ತು. ಆದರೆ ಬಿಡಿ , ಅದೇ ಸ್ಟೋರಿಯನ್ನು ಒಂದು ತಿಂಗಳ ನಂತರ ಸ್ಟೇಟ್ ಪೇಜ್‌ಗೆ ಹಾಕಬೇಕು ಅಂತ ಹೇಳಿ ಹಾಕಿಸಿದ್ದೆ. ಅದು ಬೇರೆ. ನಾವು ಅಷ್ಟು ದೂರ ನಡೆದುಕೊಂಡು ಹೋಗಿ ಒಂದೊಳ್ಳೆ ಸ್ಟೋರಿ ಕೊಟ್ರೆ ಅದು ಠುಸ್ ಆದಾಗ ಹೇಗಾಗಬೇಡ?. ಸ್ಥಳಕ್ಕೆ ಹೋಗದೇ ಬರೆಯೋರು ಎಷ್ಟು ಜನ ಇಲ್ಲ. ಅಂತಹದ್ದರಲ್ಲಿ ನಾವು ಹೋಗಿ ಬರೆದರೂ ಹೀಗಾಯಿತಲ್ಲ ಎಂದು ಬೇಸರವಾಗಿತ್ತು ಆಗ.

ನಂಗಂತೂ ಆಗ ಲೋಕೇಶ್‌ನ ಆಸಕ್ತಿಗೆ ಖುಷಿಯಾಗಿತ್ತು.ನಾವು ಹಣವೂ ಆಗ ಅವರಿಗೆ ಕೊಡುವುದು ಕಡಿಮೆ.ಯಾವಾಗಲಾದರೂ ಕೊಡುತ್ತಿದ್ದೆವು.ಅದೂ ಅವರ ಶ್ರಮಕ್ಕೆ ಸಾಲದು.ಅವರ ಸಹಕಾರ ನಮಗೆ ಯಾವಾಗಲೂ ಇದ್ದೇ ಇತ್ತು.ಅದಕ್ಕೆ ನಾವು ಬೆಲೆ ಕಟ್ಟಲಾದೀತೇ?.ಹಾಗಾಗಿ ಲೋಕೇಶನಿಗೆ ಇವತ್ತೂ ಒಂದು ಥ್ಯಾಕ್ಸ್ ಇದೆ. ಈಗ ಲೋಕೇಶ್ ಪ್ರಜಾವಾಣಿಗೆ ನ್ಯೂಸ್ ಬರೀತಾರೆ. ಹಾಗಾಗಿ ನಮ್ಮತ್ರ ಇರೋ ಫೋಟೋ ಈಗ ಅವರಿಗೂ ಕಳುಹಿಸುತ್ತೇನೆ.ಏನಿದ್ದರೂ ಅವರಿಗೊಂದು ಫೋನು ಮಾಡೇ ಮಾಡ್ತೇನೆ.ಥ್ಯಾಂಕ್ಸ್ ಲೋಕೇಶ್.




ಆವತ್ತು ಲೋಕೇಶ ಕ್ಲಿಕ್ಕಿಸಿದ ಚಿತ್ರ ಇದು . .

ಜೈಲು ಹಕ್ಕಿಯ ಕತೆ. . .

ಆತ ಕೈದಿ.ಕಂಬಿಯೊಳಗೆ ಓದುತ್ತಿದ್ದಾನೆ.ಹಾಗೆ ಓದಿ ಡಿಗ್ರಿ ಪಾಸು ಮಾಡಿದ್ದ ,ಮತ್ತೆ ಪತ್ರಿಕೋದ್ಯಮ ಡಿಪ್ಲೋಮಾಕ್ಕೆ ಫೀಸು ಕಟ್ಟಿ ಓದುತ್ತಿದ್ದ , ಈ ನಡುವೆ ಕಾನೂನು ಓದಬೇಕೆಂದು ವ್ಯವಸ್ಥೆ ಮಾಡುತ್ತಿದ್ದ ,ಆದರೆ ಅದಕ್ಕೊಂದು ಅನುಮತಿ ಜೈಲಲ್ಲಿ ಸಿಕ್ಕಿರಲಿಲ್ಲ.ಈತ ನಮ್ಮೂರಿನ ಪದ್ಮನಾಭ.

ಗುತ್ತಿಗಾರಿನ ಚತ್ರಪ್ಪಾಡಿ ಪದ್ಮನಾಭ ಅದ್ಯಾವುದೋ ಕಾರಣಕ್ಕೆ ಜೈಲು ಸೇರಿದ್ದ.ಆಗ ಆತನದು ಓದುವ ಪ್ರಾಯ.ಜೈಲು ಸೇರಿದ ನಂತರ ಓದುವುದಕ್ಕೆ ಸಾಧ್ಯವಾಗಿರಲಿಲ್ಲ.ಹಾಗಾಗಿ ಆತನ ಹಠ ಮುಂದುವರಿದಿತ್ತು ಜೈಲಲ್ಲಾದರೂ ಓದಲೇ ಬೇಕು ಅಂತ ನಿರ್ಧರಿಸಿ ಡಿಗ್ರಿಯವರೆಗೂ ಓದಿದ್ದ.ಆದರೆ ಕಾನೂನು ಓದಬೇಕೆಂಬ ಅವನ ಆಸೆಗೆ ಕಲ್ಲು ಬಿದ್ದಿತ್ತು.ಈ ವಿಷಯ ನನ್ನ ಕಿವಿಗೆ ಬಿದ್ದಿತ್ತು.ಹೀಗಾಗಿ ನಾನು ಉಷಾಕಿರಣಕ್ಕೆ ಸ್ಟೋರಿ ಮಾಡಿದೆ.ಅದು ರಾಜ್ಯಾದ್ಯಂತ “ ಜೈಲು ಹಕ್ಕಿಯ ಕಲಿಯುವಾಸೆಗೆ ಕಾನೂನು ತೊಡಕು “ ಎಂದು ಹೆಡ್ಡಿಂಗ್‌ನಲ್ಲಿ ಬಂದಿತ್ತು.ಇದೊಂದು ರೀತಿಯ ಸಂಚಲನ ಉಂಟುಮಾಡಿತ್ತು. ಇದರ ಜೊತೆಗೆ ಈಟಿವಿಯ ವಿನಾಯಕನೂ ಈ ಸ್ಟೋರಿ ಮಾಡಿದ , ಮತ್ತು ಹಾಯ್ ಬೆಂಗಳೂರಿನಲ್ಲೂ ಈ ವರದಿ ಬಂದಿತು. ಇದೆಲ್ಲದರಿಂದ ಈ ಸುದ್ದಿ ಇನ್ನಷ್ಟು ಸಂಚಲನ ಮೂಡಿಸಿತು. ಕೆಲವೇ ದಿನಗಳಲ್ಲಿ ಪದ್ಮನಾಭನ ಕಷ್ಠಕ್ಕೊಂದು ದಾರಿಯೂ ಸಿಕ್ಕಿತು.

ಅದಾಗಿ ಕೆಲ ಸಮಯದ ನಂತರ ಸಿಕ್ಕ ಪದ್ಮನಾಭ ಮತ್ತೆ ಅದೇ ವಿಷಯ ನೆನಪಿಸಿಕೊಡದ್ದು ಸಮಾಧಾನ ಎನಿಸಿತು.ನಮ್ಮ ಕೆಲಸವೂ ಸಾರ್ಥಕ ಎನಿಸಿತು.

15 November 2010

ಮಾಜಿಯ ಕತೆ. .

ಆವತ್ತೊಂದು ದಿನ ಹೀಗೆಯೇ ಗುತ್ತಿಗಾರು ಕಡೆಗೆ ಹೋಗಿದ್ದಾಗ ಯಾವುದೋ ಕಾರಣಕ್ಕೆ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ನೆನಪಾದರು.ಕೂಡಲೇ ಮಿತ್ರ ಗೋಪಾಲ ಚತ್ರಪ್ಪಾಡಿಯವರಲ್ಲಿ ಅವರ ಕುರಿತು ವಿಚಾರಿಸದಾಗ ಅವ್ರು ಮನೆಯಲಿದ್ದಾರೆ ಹೋಗೋಣ , ಅಂದ್ರು ತಕ್ಷಣವೇ ಅವರ ಮನೆಗೆ ಹೋದಾಗ ಮನೆಯಲ್ಲಿ ಅದೇನೋ ಯೋಚನೆಯಲ್ಲಿ ಕುಳಿತುಕೊಂಡಿದ್ದರು. ನಮ್ಮನ್ನು ನೋಡಿದ ತಕ್ಷಣವೇ , ಹೋ. . ಸ್ವಾಮಿ, ಬಲೆ . . ಅಂತ ಹೇಳಿ, ದಾನೆ ಬತ್ತರ್ ಎಂದು ವಿಚಾರಿಸಿದಾಗ , ನಿಮ್ಮ ಸ್ಥಿತಿಯ ಬಗ್ಗೆ ಪೇಪರಿಗೆ ನ್ಯೂಸ್ ಮಾಡಲು ಬಂದದ್ದು ಅಂತ ಹೇಳಿದೆ. ಅವರು ಎಲ್ಲಾ ಡೀಟೈಲ್ಸ್ ಕೊಟ್ರು. ಅದಾಗಿ ಎರಡು ದಿನದ ನಂತರ , ಗೋಪಾಲ್ ಫೋಟೋ ಕೊಟ್ಟ ಬಳಿಕ ಉಷಾಕಿರಣದಲ್ಲಿ ನ್ಯೂಸ್ ಬಂತು. “ಮಾಜಿ ಶಾಸಕರ ಕತೆ “ ಎಂಬ ಹೆಡ್ಡಿಂಗ್‌ನಲ್ಲಿ ಆ ನ್ಯೂಸ್ ಇತ್ತು. ಇಡೀ ಪತ್ರಿಕಾ ಬಳಗದಲ್ಲಿ ಅದು ಮೊತ್ತ ಮೊದಲ ಬಾರಿಗೆ ಮಾಜಿ ಶಾಸಕ ಹುಕ್ರಪ್ಪರ ಬಗ್ಗೆ ಬರೆದ ಸುದ್ದಿಯಾಗಿತ್ತು.

ಇದನ್ನು ನೋಡಿದ ಈಟಿವಿ ವಿನಾಯಕನೂ ಇಲ್ಲಿಗೆ ಬಂದ.ಜೊತೆಗೆ ಪ್ರವೀಣ ಕೂಡಾ. ನಾನು ಇವರಿಬ್ಬರನ್ನು ಅಲ್ಲಿಗೆ ಕರೆದೊಯ್ದೆ. ಆಗ ಮಾಜಿ ಶಾಸಕರು ಗೇರು ಬೀಜ ಕೊಯ್ಯಲು ಹೋಗಿದ್ದರು.ವಿನಾಯಕ ಇದನ್ನೆಲ್ಲಾ ಶೂಟ್ ಮಾಡಿ ಬಂದ. ನಮ್ಮ ಮನೆಗೆ ಆ ನ್ಯೂಸ್ ನಂತರ ಇಬ್ಬರೂ ಬಂದು ಈ ಸ್ಟೋರಿಗೆ ಸಂಬಂಧಪಟ್ಟಂತೆ ಮೊದಲ ಪಿಟುಸಿಯನ್ನೂ ವಿನಾಯಕ ನೀಡಿದ. ಒಂದು ವಾರದೊಳಗೇ ಈಟಿವಿಯಲ್ಲಿ ಹೆಡ್‌ಲೈನ್ ನ್ಯೂಸ್ ಆಗಿ ಪ್ರಚಾರವಾಯಿತು. ಇದರ ನಂತರ ಅನೇಕ ಚಾನೆಲ್ಲುಗಳು ಬಂದವು. ಕೆಲ ಪತ್ರಿಕೆಗಳು ಆ ಬಳಿಕ ಹೊಸ ರೂಪಕೊಟ್ಟು ಟ್ಯಾಪಿಂಗ್ ನಿರತ ಶಾಸಕ ಎಂದೂ ಬರೆದವು. ಹೀಗೇ ಒಂದೊಳ್ಳೆಯ ವಿಷಯವನ್ನು ಹೊರ ತೆಗದ ಬಳಿಕ ಇಂದಿಗೂ ಹುಕ್ರಪ್ಪರ ಬಗೆ ನ್ಯೂಸ್‌ಗಳು ಬರುತ್ತಲೇ ಇರುತ್ತದೆ. ಆದರೆ ಮೊದಲ ಬಾರಿಗೆ ಈ ಸುದ್ದಿಯನ್ನು ಹೊರತೆಗೆದನೆಂಬ ಖುಷಿ ನನಗಿತ್ತು.ಜೊತೆಗೆ ವಿನಾಯಕನಿಗೂ ಈ ಸ್ಟೋರಿ ಹೊಸ ಟರ್ನ್ ಕೊಟ್ಟಿತ್ತು. ಆ ನಂತರ ಎಲ್ಲಾ ಪತ್ರಿಕೆ ಈ ನ್ಯೂಸ್ ಮಾಡಿದ್ದರು.ಮೊದಲ ಬಾರಿಗೆ ಉಷಾಕಿರಣವು ಹುಕ್ರಪ್ಪರ ಸ್ಟೋರಿ ಪ್ರಕಟಿಸಿತ್ತು. ಹುಕ್ರಪ್ಪರು ಇಂದಿಗೂ ನಮ್ಮ ಈ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ.

12 October 2010

ಗೆಳೆಯನೊಬ್ಬ ಸಿಕ್ಕಿದ . . ಇನೊಬ್ಬನೂ ಜೊತೆಯಾದ . .

ಅಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರದಾನಿ ದೇವೇ ಗೌಡ ಬಂದಿದ್ದರು. ಬೆಳಗ್ಗೆಯೇ ಕುಕ್ಕೆಗೆ ಬಂದ ದೇವೇ ಗೌಡ ಆ ನಂತರ ಅವರು ಇನ್ನೆಲ್ಲಿಗೋ ತೆರಳುವವರಿದ್ದರು. ಸುಬ್ರಹ್ಮಣ್ಯದ ವರದಿಗಾರರಾಗಿ ನಾವೆಲ್ಲಾ ಬೆಳಗ್ಗೆಯೇ ಅಲ್ಲಿದ್ದೆವು. ದೇವಸ್ಥಾನಕ್ಕೆ ಹೋಗಿ ಬಂದ ನಂತರ ಅವರು ವಿ‌ಐಪಿ ಕೊಠಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವುದು ಸಾಮಾನ್ಯ ರೂಢಿ. ಅಂದೂ ಹಾಗೆಯೇ ದೇವಸ್ಥಾನಕ್ಕೆ ಹೋಗಿ ಬಂದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾರೆ ಅನ್ನುವಷ್ಠರಲ್ಲೇ ಅಲ್ಲಿಗೆ ಓಡೋಡಿ ಬಂದವನು ಈಟಿವಿಯ ವಿನಾಯಕ. ಆಗ ಪರಿಚಯ ಇಲ್ಲ.ಆತನೂ ಹೊಸಬ. ನಾವು ಇನ್ನೇನು ದೇವೇ ಗೌಡರ ಜೊತೆ ಮಾತನಾಡಬೇಕು ಎನ್ನುವಷ್ಠರಲ್ಲಿ ವಿನಾಯಕ ಹೇಳಿದ , ಸರ್ ,ಲೋಗೋ ಹಿಡಿಬೇಕಿತ್ತಲ್ಲಾ , ಸರಿ , ನನಗೆ ಏನು ಮಾಡೋದು ಅಂದೆ.ನಿಮಗೆ ಮತ್ತೆ ರೆಕಾರ್ಡ್ ಆದದ್ದು ಕೇಳಿಸುತ್ತೇನೆ ಅಂದ. ಹಾಗೆಯೇ ಲೋಗೋ ಹಿಡಿದಾಯಿತು. ನನ್ನ ಪರಿಚಯವೂ ಅವನಿಗಾಯಿತು. ಆ ನಂತರ ಆತ ನನಗೆ ಆಗಾಗ ಫೋನು ಮಾಡುತ್ತಲಿದ್ದ. ನಾನು ಮಾಹಿತಿ , ಸ್ಟೋರಿಗನ್ನು ನೀಡುತ್ತಿದ್ದೆ. ದಿನ ಕಳೆದಂತೆ ಒಳ್ಳೆಯ ಫ್ರೆಂಡ್‌ಗಳಾದೆವು. ಇಂದಿಗೂ ಕೂಡಾ ಅದೇ ಬಾಂಧವ್ಯ ಇದೆ. ಮಾತ್ರವಲ್ಲ ಹಿತ ಬಯಸುವ ಒಳ್ಳೆಯ ಸ್ನೇಹಿತರಾಗಿಯೂ ಇದ್ದೇವೆ.ಆತ ಇಂದು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರನಾಗಿ ಮಿಂಚುತ್ತಿದ್ದಾನೆ. ಮೊದಲಿಗೆ ಸುಬ್ರಹ್ಮಣ್ಯದಿಂದ ಆತ ಪೊಲಿಟಿಕಲ್ ವರದಿ ಆರಂಭಿಸಿದ್ದು ಅನ್ನೋದು ಇನ್ನೊಂದು ಸ್ಪೆಷಾಲಿಟಿ.

ವಿನಾಯಕ ಗಂಗೊಳ್ಳಿಯವನಾಗಿದ್ದ. ಪುತ್ತೂರಲ್ಲಿ ಕೆಲಸದ ನಿಮಿತ್ತ ವಾಸ್ತವ್ಯ ಹೂಡಿದ್ದ. ಹೀಗೆ ಸುಳ್ಯ , ಸುಬ್ರಹ್ಮಣ್ಯದ ಕಡೆಗೆ ಬರುತ್ತಿದ್ದ ವಿನಾಯಕನ ಜೊತೆಗೆ ಪುತ್ತೂರು ಕೇಬಲ್ ನೆಟ್‌ವರ್ಕ್ ಚಾನೆಲ್ ಮತ್ತು ಕರಾವಳಿ ವಾರ್ತೆಯ ಪ್ರವೀಣ್ ಕೂಡಾ ಜೊತೆಯಾಗಿ ಆ ನಂತರ ಬರುತ್ತಿದ್ದರು. ನಂಗೂ ವಿನಾಯಕನ ಮೂಲಕ. ಪ್ರವೀಣ ಇನ್ನೊಬ್ಬ ಒಳ್ಳೆ ಫ್ರೆಂಡ್ ಆದ್ರು. ಅವರಿಬ್ಬರಿಗೂ ಅದೆಷ್ಟೋ ಸ್ಟೋರಿಗಳನ್ನು ನೀಡುತ್ತಿದೆ. ಅವರು ಬೆಳಗ್ಗೆ 7 - 8 ಗಂಟೆಗೆ ಪುತ್ತೂರಿನಿಂದ ಮನೆಗೆ ಬರುತ್ತಿದ್ದರು. ನನಗೆ ಮನೆಯಲ್ಲಿ ಬೆಳಗ್ಗೆ ಹಟ್ಟಿಯ ಕೆಲಸ ಇದ್ದಿತ್ತು. ಆ ಬಳಿಕ ಹಾಲನ್ನು ಸಮೀಪದ ವಾಹನಕ್ಕೆ ನೀಡಿ ಬರಬೇಕಾಗಿತ್ತು. ಆ ಬಳಿಕ ಜೊತಯಾಗೇ ಮನೆಯಲ್ಲಿ ಕಾಫಿ ಕುಡಿದು ಮುಂದಿನ ಪ್ರಯಾಣ ಮಾಡುತ್ತಿದ್ದೆವು.ಹಾಗೇ ಇಂತಹದ್ದೇ ಅದಷ್ಟೋ ದಿನ ನಮ್ಮ ಪಾಲಿಗೆ ಬಂದಿತ್ತು. ಅಂತಹದ್ದರಲ್ಲಿ ಒಂದು ದಿನ ಸನನಗೂ ವಿನಾಯಕನಿಗೂ ಒಂಚೂರು ಹಾಗೂ . . ಹೀಗೂ ಆಗಿತ್ತು. ಅಂದು ವಿನಾಯಕ ಮನೆಗೆ ಬಂದು ಗುತ್ತಿಗಾರಿಗೆ ಒಂದು ಸ್ಟೋರಿಗೆ ಹೋಗಿ ಸುಬ್ರಹ್ಮಣ್ಯಕ್ಕೆ ಹೋಗೋದು ಅಂತ ಮಾತನಾಡಿದ್ದೆವು.ಆತ ನೇರವಾಗಿ ಗುತ್ತಿಗಾರಿಗೆ ಹೋಗಿದ್ದ.ನಾನು ಮನೆಯಲ್ಲಿ ಕಾದು ಕುಳಿತು ಫೊನು ಮಾಡಿದಾಗ ನಾನು ಗುತ್ತಿಗಾರಿನಲ್ಲಿ ಇದ್ದೇನೋ ಅಂದ. ನನಗೆ ಬೇಸರವಾಗಿತ್ತು.ಅವನಿಗಾಗಿ ಕಾದು ಕುಳಿತು ಆತ ನೇರವಾಗಿ ಹೋದನಲ್ಲ ಎಂಬ ಸಿಟ್ಟು , ಬೇಸರ ಎರಡೂ ಆಗಿತ್ತು. ಸರಿ ಅಂತ ಫೋನು ಕಟ್ ಮಾಡಿದೆ. ಮತ್ತೆ ಸುಬ್ರಹ್ಮಣ್ಯಕ್ಕೆ ಬಾ ಅಂದಿದ್ದ. ನಾನು ಹೋಗಲೇ ಇಲ್ಲ. ಆತ ಫೋನು ಮಾಡುವಾಗ ನಾನು ಕಟ್ ಮಾಡಿದೆ. ಪಾಪ , ಸಂಜೆ ಆತ ಮನೆಗೇ ಬಂದ. ನಾನು ಬೇರೆಲ್ಲಿಗೋ ಹೊರಟಿದ್ದೆ. ಆಯ್ತು ಮಾರಾಯ ಅಂತ ಹೇಳಿ ನಾನು ಅವನನ್ನು ಮಾತನಾಡಿಸದೇ ನೇರವಾಗಿ ಹೋದೆ. ಆ ನಂತರ ನನಗೂ ಪಶ್ಚಾತ್ತಾಪವಾಯಿತು ಅದು ಬೇರೆ. ನನಗೆ ಬೇಸರವಾಗಿದೆ ಅಂತ ಆತನಿಗೂ ಅನಿಸಿತು. ಸ್ಸಾರಿ ಮಾರಾಯ ಅಂತ ಮತ್ತೆ ಮತ್ತೆ ಫೋನು ಮಾಡಿ ಹೇಳಿದ. ಪಾಪ ಏನಾದ್ರೂ ಫ್ರೆಂಡ್ ಅಲ್ವಾ. ಮರುದಿನದಿಂದ ಒಂದೇ ಹಾದಿ. ಅದೊಂದು ಘಟನೆ ಬಿಟ್ಟರೆ ವಿನಾಯಕ ಮತ್ತು ನನ್ನ ಮಧ್ಯೆ ಇಂದಿಗೂ ಒಂದೇ ಹಾದಿ ನಮ್ಮದು. ಪ್ರವೀಣ ಇನ್ನೊಬ್ಬ ಗೆಳೆಯ.ಇಂದಿಗೂ ಪುತ್ತೂರಿನ ಪ್ರವೀಣ್ ಮನೆಗೆ ಹೋಗ್ತೇನೆ. ಹೀಗೇ ವಿನಾಯಕ ಜೊತೆ ಹೋಗುವಾಗ ಅದೆಷ್ಟೋ ಇಂಟೆರೆಸ್ಟಿಂಗ್ ಸಂಗತಿಗಳಾಗಿವೆ.ಒಳ್ಳೋಳ್ಳೆ ಸ್ಟೋರಿಗಳನ್ನೂ ಮಾಡಿದ್ದೇವೆ.

11 October 2010

ಭೂಮಿ ನಡುಗಿತು . . ಗುಡ್ಡ ಕುಸಿಯಿತು . .

ಆಗ ಸುದ್ದಿಗಾಗಿ ಕಾಡು , ಹಳ್ಳಿ ಅಲೆದು ಎಷ್ಟೇ ಖರ್ಚಾದರೂ ಸರಿ ಗ್ರಾಮೀಣ ಸುದ್ದಿಯನ್ನು ನೀಡುವುದು ಒಂದು ಥ್ರಿಲ್ ಕೊಡುತ್ತಿದ್ದ ಸಮಯ. “ಉಷಾಕಿರಣ”ವೂ ಹಾಗೆ ಸುದ್ದಿಯನ್ನು ಚೆನ್ನಾಗೇ ಹಾಕುತ್ತಿತ್ತು.ಹಾಗಾಗಿ ಖರ್ಚು ನೋಡುತ್ತಿರಲೇ ಇಲ್ಲ ಸುದ್ದಿ ಬರಬೇಕು ಅನ್ನೋದು ಮುಖ್ಯವಾಗಿತ್ತು.

ಆವತ್ತು 2005 ಆಗಸ್ಟ್ 18. ಬೆಳಗ್ಗೆ ಮನೆಯಿಂದ ಅದೇ ಸ್ಕೂಟರ್ನಲ್ಲಿ ಗುತ್ತಿಗಾರಿಗೆ ಹೋಗಿದ್ದೆ.ಆಗ ಮಳೆಗಾಲ ಬೇರೆ. ಒಂದು ವಾರದಿಂದ ಮಳೆ ಜೋರಾಗೇ ಸುರಿಯುತ್ತಿತ್ತು.ಅಂದು ಮಾತ್ರಾ ಸ್ವಲ್ಪ ಕಡಿಮೆ. ಗುತ್ತಿಗಾರಿನಲ್ಲಿ ನನ್ನ ಕೆಲಸ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಛಾಯಾಚಿತ್ರ ಗ್ರಾಹಕ ಗೋಪಾಲ ಚತ್ರಪ್ಪಾಡಿ ಸಿಕ್ಕಿ , ಮಹೇಶಣ್ಣ ಕೊಲ್ಲಮೊಗ್ರಕ್ಕೆ ಹೋಗಲಿಕ್ಕಿದೆ ಬರ್ತೀರಾ ?, ನಮ್ಮ ಮೆಸ್ಕಾಂನವರು ಅಲ್ಲಿಗೆ ಹೋಗ್ತಾರೆ ಜೀಪಲ್ಲಿ ,ಬನ್ನಿ ಅಂತದ್ರು.ಎಂತ ವಿಶೇಷ ?, ಅಂದಾಗ ಅಲ್ಲಿ, ಇಡೀ ಗುಡ್ಡವೇ ಕುಸೀತಾ ಇದೆಯಂತೆ , ಸಮೀಪದ ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಂತೆ , ಭೂಕಂಪದ ಅನುಭವವಾಗುತ್ತಂತೆ ಅಂದ್ರು. ಸರಿ ಹೋಗೋಣ ಅಂದೆ. ಮೆಸ್ಕಾಂನವರೊಂದಿಗೆ , ಗೋಪಾಲ ಚತ್ರಪ್ಪಾಡಿ ಮತ್ತು ನಾನು ಸೇರಿ ಎಂಟು ಜನ ಕೊಲ್ಲಮೊಗ್ರದ ಕಡೆಗೆ ಹೊರಟೆವು. ಗುತ್ತಿಗಾರಿನಿಂದ ಸುಮಾರು 25 ಕಿಲೋಮೀಟರ್ ದೂರ ಕೊಲ್ಲಮೊಗ್ರಕ್ಕೆ. ಅದೂ ತೀರಾ ಹದಗೆಟ್ಟ ರೋಡ್. 25 ಕಿಲೋ ಮೀಟರ್ ದೂರ ತಲಪಲು ಒಂದು ಗಂಟೆ ಸಮಯ ಹಿಡಿಯಿತು.ಆಗ ಗಂಟೆಯೂ 12 ಆಗಿತ್ತು.ಕೊಲ್ಲಮೊಗ್ರ ಕಳೆದು ಗಡಿಕಲ್ಲು ಬಂತು ಅಲ್ಲಿಂದ ಮುಂದೆ ಕಲ್ಮಕಾರ್ ಹೋಗಿ ಕಡಮ್ಮಕಲ್ ರಬ್ಬರ್ ಎಸ್ಟೇಟ್ ಮೂಲಕ ಶಿಥಿಲ ದಾರಿಯಲ್ಲಿ ಸಾಗುತ್ತಿದ್ದಾಗ ದೊಡ್ಡ ದೊಡ್ಡ ಶಬ್ದ ಕೇಳುತ್ತಿತ್ತು.ಹತ್ತಿರ ಹೊಳೆಯೆಲ್ಲಾ ಮಣ್ಣಿನ ನೀರಿನಂತೆ ಕಾಣುತ್ತಿತ್ತು.ರಬ್ಬರ್ ಎಸ್ಟೇಟ್ ಕಳೆದು ಸ್ವಲ್ಪ ದೂರ ಹೋದ ನಂತರ ಮುಂದೆ ವಾಹನ ಹೋಗೋದಿಲ್ಲ. ಕಾಡು ದಾರಿಯಲ್ಲಿ ದೂರದಿಂದ ಹೋಗಬೇಕು.ಯಾಕೆಂದ್ರೆ ಗುಡ್ಡ ಕುಸೀತ ಇದೆ.ಅಪಾಯ ಕಟ್ಟಿಟ್ಟ ಬುತ್ತಿ.ಹಾಗಾಗಿ ಸುತ್ತು ಬಳಸಿ ಕಾಡು ದಾರಿಯ ಪ್ರಯಾಣ ಮುಂದುವರಿಯಿತು. ಹಾಗೆ ಸುಮಾರು ಅದ ಗಂಟೆ ಹೋದ ಬಳಿಕ ಎದುರು ನೋಡುತ್ತಿದ್ದರೆ ಇಡೀ ಗುಡ್ಡವೇ ಕುಸೀತ ಇದೆ.ನೋಡನೋಡುತ್ತಿದ್ದಂತೆಯೇ ಎದುರಿನ ಗುಡ್ಡ ಮರದ ಸಹಿತವಾಗಿ ಬೀಳ್ತಾ ಇದೆ.ಮುಂದೆ ಹೋಗೋದಿಕ್ಕೂ ಹೆದರಿಕೆ.ಇಡೀ ಕಾಡು ನಾಶವಾಗಿ ದೊಡ್ಡ ಕಣಿವೆಯೇ ಸೃಷ್ಠಿಯಾಗಿತ್ತು.ಮತ್ತೂ ಕುಸೀತಾ ಇದೆ ಗುಡ್ಡ.ಹಾಗೆ ಕುಸಿಯುವಾಗ ಇಡೀ ಭೂಮಿಯೇ ಅದುರಿದ ಅನುಭವವಾಗುತ್ತೆ.ಸ್ವಲ್ಪ ಕಂಪನವೂ ಆಗುತ್ತದೆ. ಇದೆಲ್ಲವನ್ನೂ ಗೋಪಾಲ್ ಚತ್ರಪ್ಪಾಡಿ ತಮ್ಮ ಕ್ಯಾಮಾರದಲ್ಲಿ ಕ್ಲಿಕ್ಕಿಸಿಕೊಂಡರು.ಇದೆಲ್ಲಾ ದಾಖಲಿಸಿಕೊಂಡು ಗುಡ್ಡ ಇಳೀಬೇಕಾದ್ರೆ ಸುಸ್ತೋ ಸುಸ್ತು.ಮೈ ಬಟ್ಟೆಯೆಲ್ಲಾ ಮಣ್ಣಾಗಿತ್ತು.ಆಗ ಸಮಯ ಗಂಟೆ 3 ಆಗಿತ್ತು. ಊಟವೂ ಇಲ್ಲ.ಅಲ್ಲೇ ಕಲ್ಮಕಾರಿನಲ್ಲಿ ಇದ್ದ ಅಂಗಡಿಯಿಂದ ಬಿಸ್ಕೇಟ್ ಮತ್ತು ಹತ್ತಿರ ಮನೆಯಲ್ಲಿ ಚಾ ಕುಡಿದು ಗುತ್ತಿಗಾರಿನ ಕಡೆಗೆ ಬಂದೆವು.

ಮರುದಿನ ಪತ್ರಿಕೆಯಲ್ಲಿ ಇದು ಚಿತ್ರ ಸಹಿತವಾಗಿ ಬರಬೇಕಲ್ಲ.ಏನು ಮಾಡೋದು?. ಆಗ ಇದ್ದದ್ದು ಡಿಜಿಟಲ್ ಕ್ಯಾಮಾರಾವೂ ಅಲ್ಲ , ಅದು ರೀಲ್ ಕ್ಯಾಮಾರಾ. ಗೋಪಾಲ ಚತ್ರಪ್ಪಾಡಿ ಹೇಳಿದ್ರು ಇದನ್ನು ಸುಳ್ಯದಲ್ಲಿ ಪ್ರಿಂಟ್‌ಗೆ ಕೊಡ್ತೇನೆ ಅಲ್ಲಿಂದ ಕಳುಹಿಸೋಣ ಅಂತಾಯ್ತು. ಹಾಗೆ ಗುತ್ತಿಗಾರಿಗೆ ತಲಪುವಾಗ ಸಂಜೆ 5 ಗಂಟೆ. ಮರುದಿನ ಗೋಪಾಲ ಚತ್ರಪ್ಪಾಡಿ ಸುಳ್ಯಕ್ಕೆ ಬೆಳಗೇನೇ ಕಳುಹಿಸಿದ್ರು. ಆದ್ರೆ ಕಮ್ಯುನಿಕೇಶನ್ ಗ್ಯಾಪ್‌ನಿಂದ ಫೋಟೋ ಪ್ರಿಂಟ್ ಆಗಿ ಮತ್ತೆ ಮಧ್ಯಾಹ್ನದ ಹೊತ್ತಿಗೆ ಗುತ್ತಿಗಾರಿಗೆ ಬಂತು. ಮಂಗಳೂರಿಗೆ ಕಳುಹಿಸೋದು ಹೇಗೆ ?. ಕೊರಿಯರ್ ಮಾಡಿದ್ರೆ ಒಂದು ದಿನ ಲೇಟಾಗುತ್ತೆ.ಏನ್ ಮಾಡೋದು ಆಫೀಸಿಗೂ ಹೇಳಿ ಆಗಿದೆ . ನ್ಯೂಸ್ ಫ್ಯಾಕ್ಸ್ ಮಾಡಿಯೂ ಆಗಿದೆ.ಇಷ್ಟೆಲ್ಲಾ ಹೋಗಿ ಫೋಟೋ ಬರದಿದ್ರೆ ಹೇಗೆ ?. ಅಂತ ಛೆ . ಛೆ ಅಂತ ಯೋಚನೆ ಮಾಡುತ್ತಿರಬೇಕಾದ್ರೆ ಆಫೀಸಿನಿಂದ ಹೇಳಿದ್ರು ಎಲ್ಲಿಂದಾದ್ರು ಮೈಲ್ ಮಾಡಿ ಅಂತ. ಆಗ ಗುತ್ತಿಗಾರಿನಲ್ಲಿ ಮೈಲ್ ಇದ್ದದ್ದು ಕಾಂತಿಲ ಸತ್ಯಣ್ಣನ ಮನೆಯಲ್ಲಿ. ಸರಿ ಅವರಿಗೂ ರಿಕ್ವೆಸ್ಟ್ ಮಾಡಿ ಫೋಟೋ ಸ್ಕ್ಯಾನ್ ಮಾಡಿ ಸಂಜೆ ಏಳು ಗಂಟೆಯಿಂದ ಫೋಟೋ ಅಟ್ಯಾಚ್‌ಗೆ ಕುಳಿತಾಯಿತು,.ಒಳ್ಳೊಳ್ಳೆ 6 ಫೋಟೋ ಇತ್ತು.ಆದ್ರೂ ಫೋಟೋ ಅಟ್ಯಾಚ್ ಆಗ್ಬಕಲ್ಲಾ ?. ಅದು ನೆಟ್‌ವನ್ ಬೇರೆ ತುಂಬಾ ಸ್ಲೋ. ಆಗಾಗ ಕಟ್ ಆಗ್ತಾನೂ ಇತ್ತು.ಅಂತೂ ಇಂತು ರಾತ್ರಿ 11 ಗಂಟೆ ಆಗೋವಾಗ 2 ಫೋಟೋ ಹೋಯ್ತು. ಬಚಾವ್ ಅಂತ ಮನೆಗೆ ಬಂದಾಯ್ತು.

ಮರುದಿನ ಬ್ಯಾಕ್ ಪೇಜಲ್ಲಿ ಲೀಟ್ ಮಾಡಿ 2 ಫೋಟೋ ಸಹಿತ “ ಭೂಮಿ ನಡುಗಿತು , ಗುಡ್ಡ ಕುಸಿಯಿತು “ ಎಂಬ ಶೀರ್ಷಿಕೆಯಲ್ಲಿ ಆ ಸುದ್ದಿ ಪ್ರಕಟವಾಯಿತು.ಕೆಲ ಜನ ನೋಡಿ ಹೌದಾ ಅಂತಾನೂ ಕೇಳಿದ್ರು.






ಈ ಸುದ್ದಿ ನೋಡಿದ ಉದಯವಾಣಿಯ ವಿಠಲ್ ರಾವ್ , ಏ. . ನಂಗೂ ಫೋಟೋ ಕೊಡು ಮಾರಾಯ ಅಂದ್ರು. ಆಗ ನಮಗೆ ಬೇರೇನೂ ಗೊತ್ತಿಲ್ಲ.ಸರಿ ಅಂತ ಸುಬ್ರಹ್ಮಣ್ಯದಿಂದ ನಿನ್ನೆ ರಾತ್ರಿ 11 ಗಂಟೆಯವರೆಗೆ ಕೂತು ಕಳುಹಿಸಿದ ಫೋಟೋ ಸೆಂಟ್ ಐಟಂನಲ್ಲಿ ಇತ್ತಲ್ಲಾ ಅದನ್ನೇ ಫಾರ್ವಡ್ ಮಾಡಿದೆ. ಸರಿ ಮರುದಿನ ಉದಯವಾಣಿಯಲ್ಲೂ ದೊಡ್ಡದಾಗಿ ಬಂತು.ಸುದ್ದಿ ಎಲ್ಲಾ ಗೊತ್ತಾಯಿತು. ಹೇಗೂ ಹೆಚ್ಚು ಪ್ರಸಾರ ಇತ್ತಲ್ಲಾ , ಜನ ಮಾತಾಡಿದ್ರು. ಏ. . ಅದು ಉದಯವಾಣಿಯಲ್ಲಿ ಬಂದಿದೆ ಅಂತ ಹೇಳಿದ್ರು, ಅವರು ಅಲ್ಲಿಗೆ ಹೇಗೆ ಹೋದ್ರು ಮಾರಾಯ ಅಂತ ನನ್ನಲ್ಲೇ ಕೇಳಿದ್ರು. ..!. ನಾವು ಪೆಚ್ಚು ಮೋರೆ ಹಾಕಿಕೊಂಡು ಅದು ಅವರಲ್ಲ ನಾವು ಹೋದ್ದು ಅಂತ ಸಾರಿ ಸಾರಿ ಹೇಳಬೇಕಾಯಿತು.

10 October 2010

ಅನುಭವಕ್ಕೆ ದಾರಿಯಾಯ್ತು. .

ಕಡಬದಿಂದ ಹೊಸದಿಗಂತ ಪತ್ರಿಕೆ ಸುಮಾರು ಎರಡು ತಿಂಗಳುಗಳ ಕಾಲ ಬಿಡಿಸುದ್ದಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾಗ ಉಷಾಕಿರಣ ಪತ್ರಿಕೆ ಆರಂಭವಾಗುತ್ತದೆ ಅನ್ನೋ ಸುದ್ದಿ ತಿಳಿದಾಕ್ಷಣ ಅತ್ತ ಕಡೆ ಹೆಜ್ಜೆ ಹಾಕಿ ಮಂಗಳೂರಿನ ಕಚೇರಿಗೆ ಹೋಗಿ ಮಾತನಾಡಿ ಆಗಮಿಸಿದ್ದಾಯಿತು. ಈ ನಡುವೆ ಇಲ್ಲಿ ವರದಿ ಮಾಡೋದು ನಿಂತಿರಲಿಲ್ಲ. ಅದೇ ಒಂದು ಸ್ಕೂಟರ್.ಅದರಲ್ಲಿ ಕಡಬಕ್ಕೆ 15 ಕಿಲೋ ಮೀಟರ್ ಹೋಗಬೇಕು. ಹಾಗೂ ಹೀಗೂ ಹೋಗುತ್ತಿದ್ದೆ. ವರದಿಯೂ ಬರುತ್ತಿತ್ತು.

ಅಷ್ಟರಲ್ಲೇ ಉಷಾಕಿರಣದಿಂದ ಬುಲಾವ್ ಬಂತು.ಸುಬ್ರಹ್ಮಣ್ಯದಿಂದ ಬಿಡಿಸುದ್ದಿ ವರದಿಗಾರನಾಗಿ ಆಯ್ಕೆಯೂ ಆಯಿತು.ಆದರೆ ಇದರಲ್ಲಿ ಮಾತ್ರಾ ಹೊಸದಿಗಂತದಿಂದ ಒಂಚೂರು ಹೆಚ್ಚು ಲೈನೇಜ್ ಇತು. ಆ ದಿನಗಳಲ್ಲಿ ಬಹುಷ: ಉಳಿದೆಲ್ಲಾ ಪತ್ರಿಕೆಗಳಿಗಿಂತ ಹೆಚ್ಚಿನ ಲೈನೇಜ್ ಇದ್ದುದು ಇದರಲ್ಲಿ ಮತ್ತು ವಿ.ಕ ದಲ್ಲಿ. ಅಂತೂ 1 ಮಾಚ್ 2005 ರಿಂದ ಉಷಾಕಿರಣ ಪತ್ರಿಕೆಗೆ ಸುಬ್ರಹಣ್ಯದಿಂದ ವರದಿ ಮಾಡೋದಿಕ್ಕೆ ಆರಂಭವಾಯ್ತು.ಇಲ್ಲಿ ನಮ್ಮ ವ್ಯಾಪ್ತಿ , ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿ ಎಲ್ಲಾ. ಆಗ ನಾನು ಸುಬ್ರಹಣ್ಯಕ್ಕೆ ಹೋಗುವಾಗ ನನಗೆ ಪರಿಚಯ ಇದ್ದದ್ದು ವಿಜಯಕರ್ನಾಟಕದ ಮಂಜುನಾಥ ರಾವ್ , ಉದಯವಾಣಿಯ ವಿಠಲ ರಾವ್ ಮಾತ್ರಾ.ಇನ್ನು ಪ್ರಜಾವಾಣಿಯ ಗೋವಿಂದ ಎನ್.ಎಸ್ ಹಾಗೂ ಕನ್ನಡ ಪ್ರಭದ ಮಂಜುನಾಥ ಭಟ್ ಮತ್ತು ಆಗ ಹೊಸದಿಗಂತಕ್ಕೆ ಆಗಾಗ ವರದಿ ಮಾಡುತ್ತಿದ್ದ ಮೋಹನ್ ನಂಬಿಯಾರ್ ಇವರನ್ನೆಲ್ಲಾ ಅಷ್ಟೊಂದು ಪರಿಚಯ ಇದ್ದಿರಲಿಲ್ಲ. ಯಾಕೆಂದ್ರೆ ವಿಠಲ್ ರಾವ್ ನನಗೆ ಮೇಷ್ಟ್ರೂ ಆಗಿದ್ದರು. ಮಂಜುನಾಥ ರಾವ್ ಅವರಿಗೆ ನಮ್ಮ ಭಾಗದ ಸುದ್ದಿಗಳನ್ನೂ ನೀಡುತ್ತಿದ್ದ ಕಾರಣ ಅವರ ಪರಿಚಯ ಇದ್ದಿತ್ತು.ಉಳಿದವರ ಬಗ್ಗೆ ಗೊತ್ತಿತ್ತು , ಆದರೆ ಹೆಚ್ಚು ಪರಿಚಯ ಇದ್ದಿರಲಿಲ್ಲ.

ಮೊದಲ ಒಂದೆರಡು ತಿಂಗಳು ಕಾಂಟಾಕ್ಟ್ ಬೆಳೆಸಿಕೊಳ್ಳಲು ಮತ್ತು ಸುದ್ದಿಯ ಹಿಡಿತಕ್ಕೆ ಸಮಯ ತಗುಲಿತು. ನಂತರ ದಿನಕಳೆದಂತೆ ಅನುಭವಗಳು ಹೆಚ್ಚಾಯಿತು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರೋ ಅತಿಥಿಗಳ್ನು ಮಾತನಾಡಿಸಿ ಒಂದು ಇಂಟರ್ ವ್ಯೂ ಬರೆಯುವುದು ಕೂಡಾ ಹೆಚ್ಚಾಯಿತು. ಮೊದಲಿಗೆ ಸಿಕ್ಕಿದ್ದು ಕಿರುತೆರೆ ಕಲಾವಿದೆ , ಚಿತ್ರನಟಿ ಪವಿತ್ರಾ ಲೋಕೇಶ್. ಆವತ್ತು ಶುಕ್ರವಾರ.ದೇವಸ್ಥಾನದಲ್ಲಿ ಪೂಜೆ ನಡೆಸಿದ ಬಳಿಕ ಮಾತನಾಡಿದ್ದರು.ಅದಾಗಿ ಕೆಲ ದಿನಗಳ ನಂತರ ಅಂದರೆ 12 ಜುಲೈ 2005 ರಂದು ಕುಕ್ಕೆ ಸುಬ್ರಹಣ್ಯಕ್ಕೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನಡೆಸಲು ಬಂದಿದ್ದ ವೇಳೆ "ಉಷಾಕಿರಣ"ದ ಪ್ರತಿನಿಧಿಯಾಗಿ ನಾನು ಮಾತನಾಡಿಸಿದ್ದು ಇನ್ನೂ ನೆನಪಿನಲ್ಲಿದೆ. ಹಾಗೆಯೇ ವಿವಿದ ಅತಿಥಿಗಳು ಬಂದಾಗ ನನ್ನ ಮಾತುಕತೆ ಮುಂದಯವರೆದೇ ಇತ್ತು. ಈಗ ಹೆಚ್ಚು ಜೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗಿತ್ತು. ಆಗಲೂ ಅದೇ ಸ್ಕೂಟರ್‌ನಲ್ಲಿ ಸುಬ್ರಹ್ಮಣ್ಯಕ್ಕೆ 15 ಕಿಲೋ ಮೀಟರ್ ದೂರ ಮನೆಯಿಂದ ಎರಡು ದಿನಗಳಿಗೊಮ್ಮೆ ಅತಿಥಿಗಳು ಯಾರಾದರೂ ಬಂದರೆ ಅತ್ತ ಕಡೆ ಹೋಗುವುವಿದಿತ್ತು. ಯಾರದರೂ ಕುಕ್ಕೆಗೆ ಬರ್ತಾರೆ ಅಂದ್ರೆ ಮಾಹಿತಿ ಕೊಡೋರು ಸುಬ್ರಹ್ಮಣ್ಯದ ಜಗ್ಗಣ್ಣ. ಸುಬ್ರಹ್ಮಣ್ಯದಲ್ಲಿ ಅಂಗಡಿ ಇಟ್ಟುಕೊಂಡಿರೋ ಜಗದೀಶ್ ಶೆಟ್ಟಿ ಎಲ್ಲಾ ಮಾಹಿತಿಗಳನ್ನು ಇಂದಿಗೂ ಕೊಡುತ್ತಾರೆ. ಒಂದು ಮಿಸ್ ಕಾಲ್. ಕೆಲವೊಮ್ಮೆ ಫೋನೇ ಮಾಡ್ತಾರೆ.ಅವರಿಗೆ ಆ ವಿಷಯ ಪೇಪರಲ್ಲಿ ಬರೋದಿಕ್ಕಿಂತಲೂ ಮಿತ್ರತ್ವ ಹೆಚ್ಚು ಇಷ್ಟ. ಹಾಗಾಗಿ ಜಗ್ಗಣ್ಣ ಅಂದ್ರೆ ನಮಗೆಲ್ಲಾ ಹೆಚ್ಚು ಇಷ್ಠ. ಅವರು ಹೇಳಿದ ಯಾವುದೇ ಸುದ್ದಿಯನ್ನು ಮಾಡದೇ ಇರೋದೇ ಇಲ್ಲ.ಇನ್ನು ಅವರ ವಯಸ್ಸು ನೋಡಿದರೆ ನಮಗಿಂತ ಎಷ್ಟೋ ದೊಡ್ಡ.ಆದರೆ ಅವರು ನಮಗೆ ಗೌರವ ಕೋಡೋದು ನೋಡಿದ್ರೆ ನಮಗೆ ನಾಚಿಕೆಯಾಗುತ್ತೆ. ಅಂತಹ ಜಗ್ಗಣ್ಣ ಅವರು.ಅಹಂಕಾರ ಅನ್ನೋದು ಅವರಲ್ಲಿ ಲವಲೇಶಚೂ ಕಾಣದು.ಅಂತಹ ಜಗ್ಗಣ್ಣ ಮನಗೊಂದು ಆಸ್ಥಿಯೂ ಆಗಿದ್ದರು.ಸುದ್ದಿ ಮೂಲವೂ ಆಗಿದ್ದರು.ಹಾಗಾಗಿ ನನ್ನ ಬೆಳವಣಿಗೆಯಲ್ಲಿ ಅವರ ಪಾತ್ರವೂ ಇದೆ.

ಇದರ ನಡುವೆ ಸುಬ್ರಹ್ಮಣ್ಯದ ಇತರ ವರದಿಗಾರರಾದ ಗೋವಿಂದ , ಮಂಜುನಾಥ ಭಟ್ ಹೆಚ್ಚು ಹತ್ತಿರವಾದರು. ಅವರಿಬ್ಬರೂ ಕೂಡಾ ಹೆಚ್ಚಿನ ಪ್ರೋತ್ಸಾಹವನ್ನೂ ನೀಡುತ್ತಿದ್ದರು.

06 October 2010

ದಾರಿ ಸುಗಮವಾಯ್ತು. .

ಲೋಕಲ್ ಪತ್ರಿಕೆಗಳಲ್ಲಿ ವರದಿ ಮಾಡುವುದಕ್ಕೆ , ಬರೆಯುವುದಕ್ಕೆ ಕಲಿತಾಗುತ್ತಿದ್ದಂತೆಯೇ ರಾಜ್ಯಮಟ್ಟದ ದಿನಪತ್ರಿಕೆಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾಗ ಹೊಸದಿಗಂತಕ್ಕೆ ಕಡಬದಿಂದ ವರದಿಗಾರ ಬೇಕು ಎಂಬ ಸುದ್ದಿ ಸಿಕ್ಕಿದ್ದೇ ತಡ. ಕೂಡಲೇ ಅರ್ಜಿ ಹಾಕಿ ಸಂಪಾದಕರಾದ ಪ್ರಕಾಶ್ ಅವರಲ್ಲಿ ಮಾತನಾಡಿ ಕಡಬದಿಂದ ವರದಿ ಮಾಡುವುದ್ಕಕೆ ಅವಕಾಶ ಸಿಕ್ಕಿತು.

ನಾನು ಆ ನಂತರ ಹೊಸದಿಗಂತ ಪತ್ರಿಕೆಯ ಕಡಬದ ಬಿಡಿಸುದ್ದಿ ವರದಿಗಾರ , ಅಂದರೆ ಪತ್ರಿಕಾ ಭಾಷೆಯಲ್ಲಿ ಹೇಳುವುದಾದರೆ ಸ್ಟ್ರಿಂಜರ್.ಸಂಬಳ ನಾವು ಮಾಡಿದ ವರದಿಯ ಮೇಲೆ.ಅಂದರೆ ಇಲ್ಲಿ ಕಾಲಂ ಸೆಂಟಿ ಮೀಟರ್ ಲೆಕ್ಕ.ಒಂದು ಕಾಲಂ ಸೆಂಟಿಮೀಟರ್‌ಗೆ ಒಂದು ರುಪಾಯಿ ಇತ್ತ.ಮನೆಯಿಂದ ಕಡಬವು 15 ಕಿಲೋ ಮೀಟರ್ ದೂರದಲ್ಲಿದೆ.ಇಡೀ ಕಡಬ ಪ್ರದೇಶವು ಮತ್ತೂ ಒಂದು ೩೦ ಕಿಲೋ ಮೀಟರ್ ಆಗಬಹುದು. ಖರ್ಚು ಲೆಕ್ಕಹಾಕಿದರೆ ಏನೂ ಸಿಗಲಾರದು ಕೈಯಿಂದಲೇ ಖರ್ಚಾದೀತು.ಆದರೂ ಅವಕಾಶ ಬಿಡಲಿಲ್ಲ. ಒಂದು ಸ್ಕೂಟರ್ ಇತ್ತು.ಅದರಲ್ಲಿ ಕಡಬದ ಕಡೆಗೆ ಹೋಗಲಾರಂಭಿಸಿತು. ಹೊಸದಿಗಂತಕ್ಕೆ 2005 ರ ಮಾರ್ಚ್‌ನಲ್ಲಿ ಸೇರಿಯಾಗಿತ್ತು.

ಕಡಬಕ್ಕೆ ಮೊದಲು ಹೋದಾಗ ಅಲ್ಲಿನ ಸ್ಟೇಷನ್ ಎದುರುಗಡೆ ಒಂದು ಪೇಪರ್ ಸ್ಟಾಲ್ ಇತ್ತು.ಅಲ್ಲಿಗೆ ಹೋಗಿ ನನ್ನ ಪರಿಚಯ ಮಾಡಿಕೊಂಡ ಬಳಿಕ ಅಲ್ಲಿನ ಇತರ ಪತ್ರಿಕೆಯ ವರದಿಗಾರರನ್ನು ಸಂಪರ್ಕಿಸಿದೆ. ಉದಯವಾಣಿಯ ನಾಗರಾಜ್ ಕಡಬ ಜೊತೆಯಾದರು.ಅವರ ಜೊತೆಗೆ ಅಲ್ಲಿನ ಸುದ್ದಿ ವರದಿಗಾರ ಹರೀಶ್ , ವಿಜಯ್ ಕೂಡಾ ಪರಿಚಯವಾದರು.ಆ ಬಳಿಕ ಅವರೊಂದಿಗೆ ವಿವಿದ ಚಿಕ್ಕ ಪುಟ್ಟ ವರದಿಗೆ ತೆರಳಲು ಆರಂಭವಾಯಿತು. ಹಾಗೇ ಮೊದಲ ಬೈಲೈನ್ ಸ್ಟೋರಿಯೊಂದು 2005 ಏಪ್ರಿಲ್ 19 ರಂದು ಪ್ರಕಟವಾಯಿತು. “ ಮೋಕ್ಷ ಕಾಣದ ನೀರಿನ ಯೋಜನೆ” ಎಂಬುದು ಆ ಸ್ಟೋರಿಯ ಹೆಡ್ಡಿಂಗ್. ಕಡಬದ ಕೊಂಬಾರು ಕಾಲನಿಯ ಕುಡಿಯುವ ನೀರಿನ ಯೋಜನೆಯ ವರದಿ ಅದಾಗಿತ್ತು. ಆ ಬಳಿಕ ಇಲ್ಲೊಬ್ಬ ಹೊಸದಿಗಂತದ ವರದಿಗಾರನಿದ್ದಾನೆ ಎಂಬು ಊರಿಗೆ ಗೊತ್ತಾಯಿತು. ಕೆಲ ಫೋನುಗಳು ಆ ನಂತರ ಬರಲಾರಂಭಿಸಿತು.ಸುದ್ದಿಗಳು ಹೆಚ್ಚು ಹೆಚ್ಚು ಬರಲಾರಂಭಿಸಿತು.ಹೀಗೇ ಒಂದು ತಿಂಗಳು ಕಳೆದಾಗ ವಿಜಯ ಕರ್ನಾಟಕದ ಇನ್ನೊಂದು ಪತ್ರಿಕೆ ಉಷಾಕಿರಣವು ಬರುತ್ತಿದೆ ಎಂಬ ಸುದ್ದಿ ಸಿಕ್ಕಿತು.ತಕ್ಷಣವೇ ಅತ್ತ ಕಡೆ ಕಣ್ಣು ಹಾಯಿಸಿದೆ.

04 October 2010

ದಾರಿ ಸುಗಮವಾಯ್ತು . .

ಪುತ್ತೂರುನಿಂದ ಕಾಲೇಜು ಮುಗಿಸಿ 2002 -03 ರಲ್ಲಿ ಮನೆ ಸೇರಿದ ಬಳಿಕ ಹಾಗೇ ದಿನವೂ ಪತ್ರಿಕೆಗಳ ಮೇಲೆ ಕಣ್ಣಾಡಿಸುವುದು ಮತ್ತು ಅದಕ್ಕೆ ಪ್ರತಿಕ್ರಿಯೆ ಬರೆಯುವುದು ರೂಢಿ. ಹಾಗೇ ಪತ್ರಿಕೆ ನೋಡುತ್ತಿದ್ದಾಗ ಸುಳ್ಯದ ಪಯಸ್ವಿನಿ ಪತ್ರಕೆಯಲ್ಲಿ ವರದಿಗಾರಿಕೆ ತರಬೇತಿ ಶಿಬಿರ ನಡೆಯುತ್ತದೆ ಎಂಬ ಜಾಹೀರಾತು ಗಮನಿಸಿ ಆಸಕ್ತಿಯಿಂದ ಕೇಳಿದಾಗ ಬನ್ನಿ ಎಂಬ ಮಾಹಿತಿ ಸಿಕ್ಕಿತು.ಅಲ್ಲಿ ಒಂದಿಷ್ಟು ಗೆಳೆಯರ ಪರಿಚಯವಾಯ್ತು. ಒಳ್ಳೆಯ ತರಬೇತನ್ನು ಪಯಸ್ವಿನಿ ಪತ್ರಿಕೆ ನೀಡಿತು. ಒಂದು ವಾರಗಳ ಕಾಲ ಇಲ್ಲಿ ತರಬೇತಿಯ ಬಳಿಕ ಹಿಂದಿರುಗುವಾಗ ಪಯಸ್ವಿನಿ ಪತ್ರಿಕೆಗೆ ಗೌರವ ವರದಿಗಾರನಾಗಿ ಕೆಲಸ ಮಾಡುವಂತೆ ಪತ್ರಿಕೆಯ ಸಂಪಾದಕ ಅಬ್ದುಲ್ ಸತ್ತಾರ್ ಗೋರಡ್ಕ ಹಾಗೂ ಮುಖ್ಯವರದಿಗಾರ ದುರ್ಗಾಕುಮಾರ್ ನಾಯರ್ಕೆರೆ ಹೇಳಿದ್ದರು. ನನಗೂ ಹೇಗೂ ಅದು ಆಸಕ್ತಿಯ ವಿಷಯವೂ ಆಗಿತ್ತು.ಅದರಂತೆ ಪಯಸ್ವಿನಿ ಪತ್ರಿಕೆಗೆ ವರದಿ ಮಾಡುವುದಕ್ಕೆ ಶುರುವಾಯಿತು.ವಿವಿದ ರೀತಿಯ ವರದಿಗಳು ಕಳುಹಿಸಿದೆ. ಅದಕ್ಕೆ ಒಪ್ಪವಾದ ಓರಣವನ್ನು ದುರ್ಗಾಕುಮಾರ್ ನೀಡಿದರು. ನಾನು ಬರೆದ ಮತ್ತೆ ಅದು ಪ್ರಿಂಟಾದ್ದು ಹೇಗೆ ಎಂಬುದನ್ನು ಗಮನಿಸುತ್ತಾ ಬಂದೆ.ಹಾಗೆ ಬರೆಯುತ್ತಾ ಬರೆಯುತ್ತಾ ಕಾಂಟ್ಯಾಕ್ಟ್ಸ್ ಹೆಚ್ಚಿತು. ಈ ನಡುವೆ ಸುಳ್ಯದ ಚೇತನಾ ಪತ್ರಿಕೆ ಮತ್ತು ಸುದ್ದಿಬಿಡುಗಡೆ ಕೂಡಾ ಹತ್ತಿರವಾಯಿತು.ಅಲ್ಲೂ ಅವಕಾಶಗಳು ಸಿಕ್ಕಿತು.ಇಂದಿಗೂ ಸುಳ್ಯದ ಈ ಎಲ್ಲಾ ಪತ್ರಿಕೆಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಇಂದಿಗೂ ಈ ಎಲ್ಲಾ ಪತ್ರಿಕೆಗಳಿಗೆ ನನ್ನಿಂದಾಗ ಸಹಕಾರ ನೀಡುವುದಕ್ಕೆ ಸಿದ್ದನಿದ್ದೇನೆ.ಯಾಕೆಂದರೆ ನನ್ನನ್ನು ಬೆಳೆಸಿದ್ದು ಸುಳ್ಯದ ಈ ಮೂರು ಪತ್ರಿಕೆಗಳು. ಪಯಸ್ವಿನಿಯ ದುರ್ಗಾಕುಮಾರ್ , ಸುದ್ದಿಯ ಹರೀಶ್ ಬಂಟ್ವಾಳ್ , ಪಯಸ್ವಿನಿಯ ದಿವಂಗತ ಅಬ್ದುಲ್ ಸತ್ತಾರ್ , ಚೇತನಾ ಪತ್ರಿಕೆಯ ಮೇನೇಜ್‌ಮೆಂಟ್‌ನಲ್ಲಿದ್ದ ನ.ಸೀತಾರಾಮ , ಲೋಕೇಶ್ ಹೀಗೆ ಎಲ್ಲರೂ ಬೆಂಬಲಿಸಿದ್ದರು. ಇವರೆಲ್ಲರ ಸಹಕಾರದಿಂದ ಸುದ್ದಿ ಬರೆಯುವುದು ಆರಂಭವಾಯಿತು.ಹಾಗೆಯೇ ಲೇಖನಗಳು , ವಿಶೇಷ ವರದಿಗಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುವುದಕ್ಕೆ 2003 - 04 ರಿಂದ ಆರಂಭವಾಯಿತು.ಅಂದಿನಿಂದ ಪತ್ರಿಕಾ ನಂಟು ಬೆಸೆಯಿತು.ದಿನಕಳೆದಂತೆ ರಾಜ್ಯಮಟ್ಟದ ಪತ್ರಿಕೆಗಳಿಗೂ ಸ್ಥಳೀಯ ವರದಿ ನೀಡುವುದಕ್ಕೆ ಶುರುವಾಯಿತು. ಒಂದೆರಡು ಲೇಖನಗಳು ತರಂಗ , ಸುಧಾದಲ್ಲೂ ಪ್ರಕಟವಾಯಿತು.

ಅಷ್ಟು ಹೊತ್ತಿಗೆ ಹೊಸದಿಗಂತ ಪತ್ರಿಕೆಗೆ ಕಡಬಕ್ಕೆ ಬಿಡಿಸುದ್ದಿ ವರದಿಗಾರ ಬೇಕೆಂಬ ಮಾಹಿತಿ ಸಿಕ್ಕಿತು.ತಕ್ಷಣವೇ ಅತ್ತ ನೋಟ ಹರಿಸಲಾಯಿತು.

03 October 2010

ವ್ಯತ್ಯಾಸ . .

ಪುತ್ತೂರು ಪುರ ಪ್ರವೇಶದ ಬಳಿಕ ಹಾಗೇ ಮೌನ. ಒಂದೆರಡು ತಿಂಗಳು ಬಳಿಕ ಮತ್ತೆ ಲೇಖನಿ ಕೈಗೆ ಬಂತು.ಆಗ "ಜನ ಈ ದಿನ " ಪತ್ರಿಕೆ ಪುತ್ತೂರಿನಿಂದ ಪ್ರಸಾರವಾಗುತ್ತಿತ್ತು. ಓದುಗರ ಓಲೆಗೆ ಒಂದು ಪತ್ರ ಬರೆದು ಕಳುಹಿಸಿದೆ.ವಿಷಯ ಬಸ್ ನಿರ್ವಾಹಕನೊಬ್ಬನ ವಂಚನೆಯ ಕುರಿತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂಬುದು ಆ ಓಲೆಯ ಸಾರಾಂಶ. ಅದೂ ಪ್ರಕಟಗೊಂಡಿತು. ಅದಾದ ಬಳಿಕ ಹೀಗೇ ಕೆಲವು ವರದಿಗಳು , ಓದುಗರ ಓಲೆಗೆ ಬರಹಗಳು , ಪ್ರತಿಕ್ರಿಯೆ ಹೀಗೇ ಎಲ್ಲವೂ "ಜನ ಈ ದಿನ"ದಲ್ಲಿ ಮುದ್ರಣ ಕಂಡಿತು. ಅದೇ ಹೊತ್ತಿಗೆ ಕಾಲೇಜು ಭಿತ್ತ ಪತ್ರದಲ್ಲೂ ಕೆಲ ಕವನ , ಹನಿಗವನ ಇನ್ನಿತರ ಬರಹಗಳು ಪ್ರಕಟವಾದವು.ಅದರಲ್ಲೊಂದು ಕವನ ಹೀಗಿತ್ತು . .

ವ್ಯತ್ಯಾಸ - ಎಂಬುದು ಶೀರ್ಷಿಕೆ

ಹಿಂದೆ ಹೇಳುತ್ತಿದ್ದರು
ಹೆಂಡತಿಯೊಬ್ಬಳು
ಮನೆಯೊಳಗಿದ್ದರೆ
ನಾನೊಬ್ಬ ಸಿಪಾಯಿ,
ಇಂದು ಹೇಳುವರು
ಹೆಂಡತಿಯೊಬ್ಬಳು
ಮನೆಯೊಳಗಿದ್ದರೆ
ನಾನೊಬ್ಬ ಬಡಪಾಯಿ !!.

ಇನ್ನೊಂದು ಶೀರ್ಷಿಕೆ : ಪ್ರೀತಿ

ಹಸಿದ ಹೃದಯಕೆ
ನೀಡುವ ಪುಷ್ಠಿದಾಯಕವಾದ
ಆಹರವೇ
ಪ್ರೀತಿ.

ಹೀಗೆ ವಿವಿದ ಕವಿತೆಗಳು ಪ್ರಕಟಗೊಂಡರೆ ಒಂದೆರಡು ಲೇಖನಗಳೂ ಪ್ರಕಟವಾಯಿತು. ಜೊತೆಗೆ ಸಿಂಗಲ್ ಲೈನ್ ಪಂಚ್ ವರ್ಡ್‌ಗಳೂ ಇದ್ದವು ಅದು ಹೇಗಿತ್ತೆಂದರೆ ;-

- ಎಲ್ಲಿಯೇ ಶ್ವಾನ ಪ್ರದರ್ಶನ ಇರಲಿ ಪೋಸ್ಟ್ ಮ್ಯಾನ್ ಮಾತ್ರಾ ಹೋಗೋದೇ ಇಲ್ , ಏಕೆಂದರೆ ಆತ ಮೊದಲೇ ನೋಡಿರುತ್ತಾನೆ ! .

- ಬಸ್ಸು ಬರಲಿಕ್ಕಿಲ್ಲವೆಂದು ಸಿಗರೇಟು ಹೊತ್ತಿಸಿದ ಕ್ಷಣದಲ್ಲೇ ಬಸ್ಸು ಬರುತ್ತದೆ !

- ಹುಡುಗಿಯೊಬ್ಬಳು ನಿಮ್ಮನ್ನು ನೋಡುತ್ತದ್ದರೆ ನಿಮಗೆ ನೋಡದಿರಲಾಗುತ್ತದೆಯೇ ?.

ಇಂತಹ ಕೆಲ ಬರಹಗಳೂ ಇದ್ದವು.ಅಂತೂ ಪುತ್ತೂರು ಎಜುಕೇಶನ್ ಮುಗಿದ ಬಳಿಕ ಇನ್ನೊಂದು ಹೊಸ ಅಧ್ಯಾಯ ಶುರುವಾಯಿತು.ಓದಿದ್ದು ಇಲೆಕ್ಟ್ರಾನಿಕ್ಸ್ ವಿಭಾಗ ಆದರೂ ಇಷ್ಠವಾದ್ದು ಲೇಖನಿ. ಆ ಕಡೆಗೇ ಹೆಚ್ಚು ಆಕರ್ಷಿಸಿತು.ಜೊತೆಗೆ ಹೆಚ್ಚು ಸಂಬಳ ಪಡೆಯುವ ಮತ್ತು ದೂರ ದೇಶಗಳಿಗೆ ಹೋಗೋ ಸಕನಸು ಇದ್ದಿರಲಿಲ್ಲ.ಏಕೆಂದರೆ ಕೃಷಿ ಭೂಮಿ ಹಚ್ಚ ಜಸಿರಾಗಿತ್ತು.ಅದಿನ್ನೂ ವಿವಿದ ಫಸಲುಗಳಿಂದ ಬಸಿರಾಗಿತ್ತು.ಕೆಲವೇ ಸಮಯದಲ್ಲಿ ಅದೆಲ್ಲವೂ ಖುಷಿ ಕೊಡುವುದ್ಕಕಿತ್ತು. ಹಾಗಾಗಿ ರಾಜಧಾನಿ ಕಡೆಗೆ ಒಂದೆರಡು ತಿಂಗಳು ಹೋಗಿ ಬಿಪಿ‌ಎಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡರೂ ಮತ್ತೆ ಮಣ್ಣು ಕರೆಯಿತು , ಕೃಷಿ ಕಣ್ಣಿಗೆ ಕಟ್ಟಿತು.3 ರಿಂದ 15 ಸಾವಿರ ಸಂಬಳದ , ಇನ್ನೊಬ್ಬರ ಕೈಗೆಳಗೆ ದುಡಿಯುವ ಬದಲು ಸ್ವತ: ಕೆಲಸ ಹೇಗೆ ಅನಿಸಿತು.ಹಾಗಾಗಿ ಮರಳಿ ಹುಟ್ಟೂರ ಮಣ್ಣಿಗೆ ಬಂದಾಯಿತು. ಆದರೆ ಇಲ್ಲೂ ಆಕರ್ಷಿತವಾದ್ದು ಲೇಖನಿ. ಬರಹ.

02 October 2010

ಹಕ್ಕಿ ಹಾರಿತು . . .

ಎಲ್ಲರನ್ನೂ ತಮಾಷೆ ಮಾಡುತ್ತಿದ್ದ ಹಾಗೇ ಭಿತ್ತಿ ಪತ್ರದಲ್ಲಿ ನನ್ನ ಆ ಪುಟ್ಟ ಕತೆ ಬಂದದ್ದೇ ತಡ.ತಮಾಷೆ ಶುರುವಾಯಿತು.ನನ್ನೊಳಗೂ ಇನ್ನೊಂದು ಹೊಸದು ಬರೆಯಬೇಕು ಅಂತ ಅನ್ನಿಸಿತು.ವಿಷಯಕ್ಕಾಗಿ ಹುಡಕಾಡಿದೆ.ಬರೆದ ಬರಹವನ್ನು ಪ್ರಕಟಿಸುವುದಕ್ಕೆ ಶಾಲಾ ಭಿತ್ತಿ ಪತ್ರವೂ ಇತ್ತು.ಮೇಷ್ಟ್ರುಗಳೂ ಬರಿ ಮಾರಾಯ ಅಂತ ಹೇಳ್ತಾನೂ ಇದ್ರು.ಹಾಗಾಗಿ ಇನ್ನೊಂದು ಹೊಸತಿಗಾಗಿ ಕಾಯುತ್ತಾ ಇದ್ದೆ. ಆಗ ಹೊಳೆದದ್ದು ಒಂದು ಹಕ್ಕಿಯ ಕತೆ . ಅದನ್ನು ಕವಿತೆಯ ರೂಪದಲ್ಲಿ ಹೀಗೆ ಬರೆದೆ . .

ಹಕ್ಕಿ ಹಾರಿತು . .

ನಮ್ಮ ಮನೆಯ ತೋಟದಲ್ಲಿ ಹಕ್ಕಿಯೊಂದು ಗೂಡು ಕಟ್ಟಿತು
ಕಾಡಿನಿಂದ ಕಡ್ಡಿ , ಹತ್ತಿ ತಂದು ಚಂದ ಮಾಡಿತು .
ಎರಡು ದಿನ ಬಿಟ್ಟು ನೋಡಿದಾಗ ಮೊಟ್ಟೆ ಎರಡು ಇದ್ದಿತು
ದಿನ ಕಳೆದಾಗ ಮೊಟ್ಟೆಯೊಡೆದು ಹಕ್ಕಿಯಾಯಿತು
ಮರಿಹಕ್ಕಿ ದೊಡ್ಡದಾಗಿ ತಾಯಿ ಹಕ್ಕಿ ಜೊತೆ ಹಾರಲು ಕಲಿತಿತು
ಒಂದು ದಿನ ಎದ್ದು ಬಂದು ಬುರ್ ಎಂದು ಹಾರಿ ಹೋಯಿತು
ನಾನು ಹೋಗಿ ನೋಡುವಾಗ ಗೂಡಿನೊಳಗೆ ಏನು ಇಲ್ಲವಾಯಿತು.



ಇದಿಷ್ಟು ಅಂದಿನ ಪದ್ಯ. ಎರಡು ದಿನದ ನಂತರ ಅದೂ ಶಾಲಾ ಭಿತ್ತಿ ಪತ್ರದಲ್ಲಿ ಪ್ರಕಟಗೊಂಡಿತು. ತಮಾಷೆ ಹಾಗೇ ಮುಂದುವರಿದಿತ್ತು.ಆದ್ರೆ ಮತ್ತೆ ಬಾಳಿಲ ಶಾಲೆಯ ಭಿತ್ತಿ ಪತ್ರದಲ್ಲಿ ಬರೆಯುವುದಕ್ಕೆ ನನಗೆ ಅವಕಾಶ ಸಿಕ್ಕಿಲ್ಲ.ಏಕೆಂದ್ರೆ ಆಗ ಹತ್ತನೇ ತರಗತಿ ಮುಗಿಯುವ ಹಂತಕ್ಕೆ ಬಂದಿತ್ತು.ಹಾಗಾಗಿ ಶಾಲೆ ನನಗೆ ಪ್ರೋತ್ಸಾಹ ಕೊಟ್ಟಿದ್ದರೂ ಹೆಚ್ಚು ತೊಡಗಿಸಿಕೊಳ್ಳುವುದಕ್ಕೆ ಆಗಿಲ್ಲ.ಆದರೆ ಈ ಜಾಗೃತಿ ನನ್ನಲ್ಲಿ ಮೂಡಿಸಿದ್ದು ಶಾಲೆಯೇ.ಆದರೆ ಮುಂದೆ ಪಿಯುಸಿಯಲ್ಲಿ ಅದಕ್ಕೆ ಹೆಚ್ಚು ಅವಕಾಶ ಇದ್ದಿರಲಿಲ್ಲ.ಹಾಗಾಗಿ ಎರಡು ವರ್ಷ ಯಾವುದೇ ಬರಹವಿಲ್ಲ.ಮುಂದೆ ಪಿಯುಸಿ ಬಿಟ್ಟು ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಹೋದಾಗ ಮತ್ತೆ ಜಾಗೃತವಾಯಿತು ಈ ಬರಹ ಪ್ರಪಂಚ.

01 October 2010

ಸೊಳ್ಳೆ ಬಂತು ಕತೆ . .

ನಾನಾಗ ಹತ್ತನೇ ತರಗತಿ.ಇಲ್ಲಿಂದಲೇ ನನ್ನ ಬರಹ ಶುರುವಾಯಿತು.ಆಗ ಶಾಲಾ ಭಿತ್ತಿ ಪತ್ರದಲ್ಲಿ ಬರೆಯುವವರ ಸಂಖ್ಯೆ ಕಡಿಮೆ ಇತ್ತು.ನಾವೆಲ್ಲಾ ಯಾರಾದರೂ ಬರೆದ್ರೆ ಅವರನ್ನೆಲ್ಲಾ ಏನಾದ್ರೂ ಹೇಳಿ ಗೇಲಿ ಮಾಡುತ್ತಿದ್ದೆವು.ಇದನ್ನೆಲ್ಲಾ ಅಧ್ಯಾಪಕರು ಗಮನಿಸ್ತಿದ್ರು.ಹಾಗಾಗಿ ನನ್ನನ್ನು ಕರೆದು ಅಧ್ಯಾಪಕರು ಹೇಳಿದ್ರು ,ನೀನು ಹೇಗಿದ್ರೂ ಹಾಸ್ಟೆಲ್‌ನಲ್ಲಿ ಇರೋದಲ್ವಾ ?. ಶಾಲೆಯ ಕೆಲಸ ಮುಗಿದ ಮೇಲೆ ರಾತ್ರಿ ಒಂದು ಕತೆ , ಕವಿತೆ ಏನಾದ್ರೂ ಬರೀ ಅಂತ ಹೇಳಿದ್ರು. ಆಯ್ತು ಸಾರ್ ಅಂದೆ. ಒಂದು ದಿನ ಕಳೆಯಿತು ವಿಷಯವೇ ಸಿಕ್ಕಿಲ್ಲ.ಮರುದಿನ ಮೇಷ್ಟ್ರು ಆಯ್ತಾ ಅಂತ ಕೇಳಿದ್ರು. ಇಲ್ಲ ಅಂದೆ. ಮಾತಾಡಿಲ್ಲ. ಅಬ್ಬಾ . . ಅಂತ ರೂಂ ಗೆ ಬಂದು ಕುಳಿತಿದ್ದೆ.ಮರುದಿನವೂ ಹೀಗೇ ಹಾಸ್ಟೆಲ್ ರೂಮಲ್ಲಿ ಕುಳಿತಿದ್ದೆ. ಅಯ್ಯೋ ಸೊಳ್ಳೆಗಳೇ ಸೊಳ್ಳೆಗಳು. ಅದಕ್ಕಾಗಿ ಮಾಸ್ಕಿಟೋ ಕಾಯಿಲ್ ಹಚ್ಚಿದ್ರೂ ಹೋಗಲೇ ಇಲ್ಲ. ಇನ್ನೂ ಒಂದೆರಡು ಹಚ್ಚಿ ಇಟ್ಟು ನಾವೆಲ್ಲಾ ರೂಂನಿಂದ ಹೊರಕ್ಕೆ ಹೋಗಿದ್ದೆವು. ಸುಮಾರು ಹೊತ್ತು ಆದ ಬಳಿಕ ಬಂದಾಗ ನಮ್ಮ ಬೆಂಚ್‌ಗೇ ಕಾಯಿಲ್ ತಾಗಿ ಅದರಿಂದ ಹೊಗೆ ಬರುತ್ತಿತ್ತು.ರೂಂ ತುಂಬೆಲ್ಲಾ ಹೊಗೆ. ಇದೇ ನನ್ನ ಚಿಕ್ಕ ಕತೆಗೆ ವಸ್ತುವಾಯಿತು.

ಅದು ಹೀಗಿತ್ತು. .

“ಸೊಳ್ಳೆ ಬಂತು ಸೊಳ್ಳೆ” ಇದು ಹೆಡ್ಡಿಂಗ್

ಪುಟ್ಟ ಶಾಲೆ ಬಿಟ್ಟು ಮನೆಗೆ ಬಂದ
ಸೊಳ್ಳೆ ಕಾಟ ಹೆಚ್ಚಾಯಿತು ಅಂತ ಹಚ್ಚಿದ ಬೆಂಕಿ
ಸೊಳ್ಳೆ ಕಾಯಿಲ್‌ಗೆ ಅಲ್ಲ ಇಡೀ ಮನೆಗೆ.ಸೊಳ್ಳೆ ಎಲ್ಲಾ ಸತ್ತಿತು ಅಂತ ಖುಷಿ ಪಟ್ಟ.


ಇದನ್ನು ಮೇಷ್ಟ್ರಿಗೆ ಕೊಟ್ಟೆ.ಓದಿದ ಮೇಷ್ಟ್ರು ಸರಿ ಅಂತ ಒಳಗಿಟ್ಟರು. ನಾನು ಅಂದುಕೊಂಡೆ ಇದನ್ನು ಹಾಕಲಾರರು ಅಂತ.ಮರುದಿನ ನೋಡಿದ್ರೆ ಭಿತ್ತಿ ಪತ್ರದಲ್ಲಿ ಅದು ಇದೆ. ಖುಷಿಯಾಯ್ತು. ಅದನ್ನು ಓದಿದ ನನ್ನ ಫ್ರೆಂಡ್ಸ್ ಎಲ್ಲಾ ನಾವೆಲ್ಲಾ ಆವತ್ತು ಗೇಲಿ ಮಾಡುತ್ತಿದ್ದಂತೆಯೇ ನನ್ನನ್ನೂ ಎಂತ ಮಾರಾಯ ಇದು . ? ಅಂತ ಗೇಲಿ ಮಾಡಿದ್ರು. ನನಗಾಯಿತು ನಾಳೆ ಇದಕ್ಕಿಂತ ಚೆನ್ನಾಗಿ ಏನಾದ್ರು ಕತೆ , ಕವಿತೆ ಬರೀಬೇಕು ಅಂತ ಯೋಚನೆ ಮಾಡಿದೆ.